ಕಸಾರಾ ಘಾಟಲ್ಲೊಂದಿಷ್ಟು ಹೊತ್ತು..
ಒಂದಿಷ್ಟು ಮುಂದೆ ಸಾಗಿದ ಬಳಿಕ ಕಸಾರ್ ಎಂಬಲ್ಲಿ ಗಾಡಿ ನಿಲ್ಲಿಸಲು ಸ್ವಲ್ಪ ಅವಕಾಶವಿತ್ತು. ಮೂರು ಮಾರು ದೂರದಲ್ಲಿರುವುದೇ ಸ್ಪಷ್ಟವಾಗಿ ಕಾಣದಷ್ಟು ಮಂಜು ಮುಸುಕಿದ ಪ್ರದೇಶವದು. ಜೊತೆಗೆ ನೆಲದ ತುಂಬಾ ತುಂಬಿದ ಹಸಿರು ಹುಲ್ಲು, ನೆಲಕ್ಕೆ ರತ್ನಗಂಬಳಿ ಹಾಸಿದಂತಿತ್ತು. ದಿನಾ ಅದೇ ಕಟ್ಟಡಗಳ ಮಧ್ಯೆ ಇದ್ದು ಬೇ'ಸತ್ತ' ಮನಸ್ಸಿಗೊಂದಿಷ್ಟು ಚೈತನ್ಯ ಬಂದಂತಾಯಿತು. ಕಾಡು, ಗುಡ್ಡ , ಹಸಿರುಗಳನ್ನೆಲ್ಲಾ ಕಾಣದ ಮನುಷ್ಯ ನಾನಲ್ಲ. ಮೊತ್ತ ಮೊದಲ ಬಾರಿಗೆ ಇದನ್ನು ಕಂಡು 'ಅದ್ಭುತ' ಎಂದೆನ್ನುತ್ತಿರುವುದೂ ಅಲ್ಲ. ಬದಲಾಗಿ ಮಣ್ಣು, ನೀರುಗಳೊಂದಿಗೆ ಆಡುವುದು ಚಿಕ್ಕಂದಿನಿಂದ ಬಂದ ಒಂದು ತೆರದ ಹುಚ್ಚು. ತೋಟದಲ್ಲಿ ಹರಿಯುವ ತೋಡಿನ ನೀರಿನಲ್ಲಿ, ಅಂತೆಯೇ ಸಣ್ಣ ಪುಟ್ಟ ಪ್ರವಾಸದ ಸಂದರ್ಭಗಳಲ್ಲಿ ಸಮುದ್ರದ ಕಿನಾರೆಯಲ್ಲಿ ಚಿಕ್ಕಂದಿನಿಂದಲೂ ಆಡಿದ ನೆನಪಿದೆ. ಮಳೆಯಲ್ಲಿ ನೆನೆಯುತ್ತಾ Football ಆಡಿ ಶಿಕ್ಷೆ ಪಡೆದಿದ್ದೂ ನೆನಪಿದೆ. ಆದರೆ ಓದು ಸಾಗಿದಂತೆ ಭವಿಷ್ಯದ ಚಿಂತೆ ಕಟ್ಟಿ, ಮಗ ತಮ್ಮಂತೆ ಕಷ್ಟಪಡಬಾರದೆಂಬ ತಂದೆ-ತಾಯಿಯರ ಮುದ್ದಿನಿಂದಾಗಿ ತೋಟದ ಮಣ್ಣು ತುಳಿಯದೆ ಬೆಳೆದು, Engineering ಅಥವಾ Medical ಎಂಬುದೊಂದು ತಲೆಯಲ್ಲಿ ತುಂಬಿ ನಿಂತು, Biology ಕಷ್ಟ ಎಂದು ಡಾಕ್ಟರಾಗುವ ಆಸೆ ಬಿಟ್ಟು, ಇಂಜಿನಿಯರಿಂಗ್ ಓದಿ, ಇಂದೊಂದು ಕೆಲಸ ಹಿಡಿದಿದ್ದಾಗಿದೆ. ಇಷ್ಟು ದಿನದ ಬದುಕಲ್ಲಿ ಕಾಣದ, ಮುಂದೆಯೂ ಕಂಡೇನೆಂಬ ನಂಬಿಕೆ ಇಲ್ಲದಿರುವ ಒಂದು ವಿಚಾರ ಎಂದರೆ 'ಒಬ್ಬ ಒಳ್ಳೆ ರೈತನಾಗು' ಅಂತ ಯಾರಾದರೂ, ಯಾರನ್ನಾದರೂ ಹರಸಿಯಾರೆನ್ನುವುದು. ಈಗಂತೂ ಎಲ್ಲ ಕೆಟ್ಟು ಅಂತಲ್ಲವಾದರೂ ಪಟ್ಟಣ ಸೇರುವ ಆಸೆಯಿರುವವರೇ. ಅದಕ್ಕೇ ಜಾಗ ಸಾಲದಾಗಿ ಹಳ್ಳಿಗಳೆಲ್ಲಾ ದಿಲ್ಲಿಗಳಾಗಹೊರಟಿವೆ. ಇರಲಿ, ಯಾರಿಗೋ ಉಪದೇಶ ಮಾಡಿ ಒಂದಿಷ್ಟು ಜನರ ಶಭಾಷಗಿರಿ, ಮತ್ತೊಂದಿಷ್ಟು ಜನರ ನಿಷ್ಠುರ ನನಗ್ಯಾಕೆ ? ಹೇಳಬೇಕಾಗಿದ್ದ ವಿಷಯ ಏನಪ್ಪಾ ಅಂತಂದ್ರೆ, ಇತ್ತೀಚಿಗೆ ಹೆಚ್ಚಿರುವ ಓದಿನ ಹುಚ್ಚಿನಿಂದಾಗಿಯೋ, ಮೊದಲಿನಿಂದಲೂ ಇದ್ದಿದ್ದೆಯೋ; ಹೊರಗಿನ ಚೆಲುವು ಆಸ್ವಾದಿಸುವ ಮನಸ್ಸಂತೂ ಬೆಳೆದಿದೆ.
ಹೀಗೆ ಕಸಾರಾ ಘಾಟಿನ ಸೊಬಗ ಸವಿಯುತ್ತಾ ಕುಳಿತಾಗ, ಹಿಂದೆಯೂ ತುಂಬಾ ಸಾರಿ ಮನದಲ್ಲಿ ಮಿಂಚಿ ಮರೆಯಾದೊಂದು ಪ್ರಶ್ನೆ ಮತ್ತೊಮ್ಮೆ ಸುಳಿಯಿತು.
ಸೌಂದರ್ಯ ಇರುವುದು ಪ್ರಕೃತಿಯಲ್ಲೋ ?
ಅದನ್ನು ನೋಡುವ ನೋಟದಲ್ಲೋ ?
ಅನುಭವಿಸುವ ಮನಸ್ಸಿನಲ್ಲೋ ?
ವ್ಯಕ್ತಪಡಿಸುವ ಮಾತುಗಳಲ್ಲೋ ?
ಒಂದಿಬ್ಬರಲ್ಲಿ ಕೇಳಿದೆ, ನಗೆಯಾಡಿದರು. 'ಇದೇನು ಮರುಳು ಇವನಿಗೆ ಎಂದೋ, ಏನೋ..!?' ಅಂತೂ ಪ್ರಶ್ನೆ ಉದ್ಭವಿಸಿದ್ದೆಲ್ಲೋ ಅಲ್ಲೇ ಉಳಿಯಿತು.
ಪಾಳುಬಿದ್ದೊಂದು ರೈಲು ಪಟ್ಟಿಯ ಬಳಿ ಒಂಟಿ ಕಂಬಿಯ ಮೇಲೆ ನಡೆಯುವ ಸರ್ಕಸ್ಸು ನಡೆಸುವವರಂತೆ, ಸುತ್ತಲ ಹಸಿರಲ್ಲಿ ಹರಡಿ ನಿಂತು ಅಷ್ಟೂ ಹಸಿರಲ್ಲಿ ನಮ್ಮದೇ ಉಸಿರೆನ್ನುವಂತೆ, ಮುಂದೊಮ್ಮೆ ಈ ಎಲ್ಲಾ ನೆನಪುಗಳನ್ನು ಮತ್ತೊಮ್ಮೆ ಹಸಿಯಾಗಿಸಲೆಂಬಂತೆ ಸ್ವಲ್ಪ ಹೊತ್ತು ಫೋಟೋ ಕ್ಲಿಕ್ಕಿಸಿಕೊಂಡು ಪಯಣ ಮುಂದುವರೆಯಿತು. ಮುಂದೆಯೂ ಇಂಥದೇ ನೋಟ. ಹಸಿರು ತುಂಬಿದ ಕಾಡು, ನಾನಿರುವ ಎತ್ತರಕ್ಕೆ ನೀನೇರಬಲ್ಲೆಯಾ ಎನ್ನುವ ಬೆಟ್ಟಗಳು, ಇಗೋ ಬಂದೆ ಎಂದೆಂದು ಮೇಲೇರಿ ಸಾಗುತ್ತಿರುವ ಮೋಡಗಳು, ಇದನ್ನೆಲ್ಲಾ ನನ್ನ ಮುಂದಿನ ಸೀಟಿನಲ್ಲಿ ಕಿಟಕಿ ಪಕ್ಕ ಕುಳಿತು ಕೆಮರಾ ಒಂದರಲ್ಲಿ ಸೆರೆ ಹಿಡಿಯುವ ಪ್ರಯತ್ನ ಮಾಡುತ್ತಿದ್ದರು. 'ನಾನು ಕಣ್ಣಲ್ಲಿ ನೋಡಿ ಮನಸ್ಸಲ್ಲಿ ತುಂಬಿಕೊಂಡಷ್ಟು, ಇವರು ಪುಟಗೋಸಿ ಕೆಮರಾದ ಕಣ್ಣಲ್ಲಿ ನೋಡಿ Memory Cardನಲ್ಲಿ ತುಂಬಿಕೊಬಹುದೇ ?' ಅಂತನ್ನಿಸಿದರೂ ಯಾರಲ್ಲೂ ಕೇಳಹೋಗಿಲ್ಲ. ಒಂದೇ ವಿಷಯಕ್ಕೆ ಮತ್ತೆ ಮತ್ತೆ ಸಮರ್ಥನೆ ಕೊಡೋದು ಬೇಕಿಲ್ಲ, ಆಲ್ವಾ..?