Thursday 14 November 2013

ಚ ಚಾ ಚಿ ಚೀ.. ಅಲ್ಲ; ಚಾಚಾ.. ಛೀ.. ಛೀ..

      ಮತ್ತೊಂದು ನವೆಂಬರ್ ೧೪. ಸ್ವತಂತ್ರ ಭಾರತದ ಮೊಟ್ಟ ಮೊದಲ ಪ್ರಧಾನಿ ಪಂಡಿತ್ ಜವಹರಲಾಲ್ ನೆಹರೂರವರ ಜನ್ಮದಿನ. ಸುಮ್ಮ ಸುಮ್ಮನೇ ಎಷ್ಟು ಜನರ ಜನ್ಮದಿನಗಳನ್ನು ಲೆಕ್ಕವಿಟ್ಟುಕೊಳ್ಳಲಾದೀತು. ಅದಕ್ಕೆ ತಮ್ಮ ಜನ್ಮದಿನವನ್ನು ಇನ್ನಾವುದೇ ಆಚರಣೆಯ ಹೆಸರಲ್ಲಿ ತಳುಕು ಹಾಕಿಬಿಟ್ಟರೆ ಆ ನೆಪದಲ್ಲಾದರೂ ತಮ್ಮನ್ನೊಮ್ಮೆ ನೆನೆಸಿಕೊಂಡಾರಲ್ಲವೇ. ಬೆರಾರದ್ದೋ ಯಾಕೆ; ಚಾಂದ್ರಮಾನ, ಆಂಗ್ಲಮಾನ ಪಂಚಾಂಗಗಳ ಗೊಂದಲಗಳ ಮಧ್ಯೆ, ನನ್ನ ಹುಟ್ಟಿದ ದಿನವೇ ನನಗೆ ನೆನಪು ಬರುವುದಿಲ್ಲ. ನಾಲ್ಕಾರು ಸ್ನೇಹಿತರು ಕರೆ ಮಾಡಿ ಶುಭಾಶಯ ತಿಳಿಸುವುದರಿಂದ ಒಂದಿಷ್ಟು ನೆನಪು ಹತ್ತುವುದುಂಟು. ಇದ್ದುದರಲ್ಲಿ ಸಮಾಧಾನಕರ ವಿಷಯ ಅಂದ್ರೆ ಮಕರ ಸಂಕ್ರಾಂತಿಯಂದು ಹುಟ್ಟಿದವ ನಾನಾದ್ದರಿಂದ ನನ್ನ ಜನ್ಮದಿನವನ್ನು ಅದರೊಂದಿಗೆ ತಗುಲಿಸಿಬಿಟ್ಟರೆ ನೆನಪಿಟ್ಟುಕೊಳ್ಳುವುದೂ ಸಲೀಸು. ಅಷ್ಟೂ ಅಲ್ಲದೆ ನನ್ನ ಜನ್ಮದಿನಕ್ಕೆ ದೇಶದ ಕೆಲವೆಡೆ ಸರ್ಕಾರಿ ರಜೆ ಘೋಷಿಸಿದ್ದಾರೆಂದೂ ಬೀಗಬಹುದಲ್ಲವೇ.! ಯಾರ ಜನ್ಮದಿನದ ಸಲುವಾಗಿ ನಮ್ಮ ನಿತ್ಯದ ಕೆಲಸಗಳು ಕಡಿಮೆಯಾಗಿ, ನಮ್ಮ ಶ್ರಮವಿರದೇ ಆ ದಿನ ಸುಖಮಯವಾಗಿ ಕಾಣುವುದೋ ಅವರನ್ನೇ ಆಲ್ವಾ ನಾವು ಮಹಾ ಮಹಿಮರೆನ್ನುವುದು. ಸಾಕು, ಆತ್ಮಪ್ರಶಂಸೆ ಕಡಿಮೆ ಮಾಡಿ ಮುಖ್ಯ ವಿಷಯಕ್ಕೆ ಬರೋಣ.

      ಅಂತೂ ನೆಹರೂರವರಿಗೆ ಮಕ್ಕಳ ಮೇಲಿದ್ದ ಪ್ರೀತಿಯ ಸಾಕಾರವಾಗಿ ಅವರ ಜನ್ಮದಿನ 'ಮಕ್ಕಳ ದಿನಾಚರಣೆ' ಆಯ್ತು. ಆದರೆ ಅವರಲ್ಲಿದ್ದ ಪ್ರೀತಿ ಸ್ವಂತ ಮಕ್ಕಳ ಮೆಲಿನದ್ದೋ! ದೇಶದ ಸಮಸ್ತ ಮಕ್ಕಳ ಮೆಲಿನದ್ದೋ! ತಿಳಿಯಲೇ ಇಲ್ಲ. ಆದರೂ ಇವರ ಬಗ್ಗೆ ನಮ್ಮಲ್ಲಿದ್ದ ಪ್ರೀತಿಯನ್ನು ತೋಡಿಕೊಳ್ಳಲು 'ಚಾಚಾ' ಎಂದು ಕರೆದೆವು. ಅವರ ನಿಲುವಂಗಿಯ ಮೇಲೆ ನಗುತ್ತಾ ನಿಂತಿದ್ದ ಗುಲಾಬಿಯನ್ನು ನೋಡಿ ಅದನ್ನೇ ಅನುಕರಿಸಲೆಂಬಂತೆ ನಮ್ಮ ಅಂಗಿಗಳಿಗೂ ಹೂ ಸಿಕ್ಕಿಸಿಕೊಳ್ಳುವ ಪ್ರಯತ್ನ ಮಾಡಿದ್ದೂ ಆಯ್ತು. ಕಿಸೆಯಲ್ಲಿ ಅದು ನಿಲ್ಲಲಾರದ್ದರಿಂದ ಅಂಗಿಯ ಗುಂಡಿ ಸಿಕ್ಕಿಸುವ ರಂಧ್ರದಲ್ಲಿ ಸಿಕ್ಕಿಸಿದರೂ ಆಗುತ್ತಿತ್ತು. ರೋಜಾ ಹೂವಾ ಏನೂ ನಮ್ಮ ಜೀವಾ ಆಗಿಲ್ಲದ ಕಾರಣ ದಾಸ್ವಾಳವಾದರೂ ಸರಿ, ಲಂಟಾನಿನ ಹೂವಿನ ಗೊಂಚಲಾದರೂ ಸರಿ; ಅಂಗಿಗೆ ಸಿಕ್ಕಿಸಿಕೊಂಡು ನಿಂತರೆ ನೆಹರೂಗಿಂತ ನಾವೇನೂ ಕಡಿಮೆ ಕಾಣುತ್ತಿರಲಿಲ್ಲ. ಕನಿಷ್ಠ ಪಕ್ಷ ಅದು ನಮ್ಮ ನಂಬಿಕೆಯ ಮಟ್ಟಕ್ಕಾದರೂ ಸತ್ಯ. ಹೂ ಇಟ್ಬಿಟ್ರೆ ಆಯ್ತಾ, ಟೋಪಿ ಹಾಕೋದು ಬೇಡ್ವಾ? ಅದೂ ಇತ್ತು. ಸುದ್ದಿ ಪತ್ರಿಕೆಯನ್ನು ಮಡಿಸಿ ದೊಡ್ಡ ದೊಡ್ಡ ದೋಣಿಗಳನ್ನೂ, ಅರಿಶಿನ ಕುಂಕುಮದ ಬಟ್ಟಲನ್ನೂ ಮಾಡಲು ಕಳಿಸಿದ್ದ ನಮ್ಮ ಗುರುಗಳು ಯಕ್ಷಗಾನದ ಕಿರೀಟ, ಗಾಂಧಿ ಟೊಪ್ಪಿಗೆಗಳನ್ನು ಮಾಡಲೂ ಕಲಿಸಿದ್ದರು. ಅದೇ ಗಾಂಧಿ ಟೋಪಿ ಅಡ್ಡಕ್ಕೆ ಧರಿಸಿದರೆ ನರ್ಸ್ ಟೋಪಿ ಆಗುತ್ತಿತ್ತು. ಇಷ್ಟೆಲ್ಲಾ ಅವತಾರ ಧರಿಸಿ ನಿಂತರೆ ನಮ್ಮನ್ನು ಕೇಳುವವರುಂಟೆ?

      ಈ ದಿನದ ಗುಣಗಾನ ಪ್ರತಿ ವರ್ಷವೂ ಊರ ಹಿರಿಯರಿಂದ, ನಮ್ಮ ಶಿಕ್ಷಕರಿಂದ ಕೇಳಿದಾಗ 'ಕಳೆದ ವರ್ಷವೂ ಇದನ್ನೇ ಹೇಳಿದ್ದರಲ್ಲಾ' ಎಂಬ ಸತ್ಯ ಯಾವತ್ತೂ ಕಣ್ಣ ಮುಂದಾಗಲೀ, ಬುದ್ಧಿಯ ಮುಂದಾಗಲೀ ಬಂದು ನಿಲ್ಲುತ್ತಿರಲಿಲ್ಲ. ಎಲ್ಲದಕ್ಕೂ ಮರೆವು ಬಂದೋ, ನೆನಪು ಹೋಗಿಯೋ ಮತ್ತೆ ಹಿಂದಿನ ವರ್ಷದ್ದೇ ಭಾಷಣ ಕೇಳಿ ಸತ್ತು ಸ್ವರ್ಗದಲ್ಲಿರುವ ಚಾಚಾಗೆ ಕೇಳಲಿ ಎನ್ನುವಂತೆ ಜೋರಾಗಿ ಚಪ್ಪಾಳೆ ತಟ್ಟಿ ಉರಿ ಬಂದ ಕೈಗಳ ಮೇಲೆ ಸಿಹಿ ಬೀಳುವುದನ್ನೇ ಕಾಯುತ್ತಾ ಕುಳಿತಿದ್ದು ಮರೆಯುವುದುಂಟೇ?

      ಪ್ರೌಢಶಾಲಾ ಶಿಕ್ಷಣ ಮುಗಿಯುವವರೆಗೂ ಇದೇ ಗುಂಗಿನಲ್ಲಿದ್ದ ನಾವು ಮುಂದೆ ಕೇಳಿದ್ದು ಇಷ್ಟು ದಿನ ನಾವಿದ್ದುದು ಭ್ರಮಾಲೋಕದಲ್ಲಿ ಎಂಬಂತಹ ಮಾತುಗಳು. ಇಷ್ಟುದಿನ ಚಾಚಾ ಎಂದು ಕರೆದವರನ್ನೇ ಛೀ..ಛೀ.. ಎನ್ನುವಂಥ ಮಾತುಗಳು. ಹತ್ತು ವರ್ಷಗಳಿಂದ ನಂಬಿಕೊಂಡು ಬಂದ ಸತ್ಯ ಹತ್ತು ನಿಮಿಷಗಳಲ್ಲಿ ಸುಳ್ಳೆಂದುಕಾಣತೊಡಗಿತು. ಭಾರತಕ್ಕೆ ಸ್ವಾತಂತ್ರ್ಯವನ್ನು ಗಳಿಸಿಕೊಡುವಲ್ಲಿ ಬಾಪೂ ಬಿಟ್ಟರೆ ಚಾಚಾರದ್ದೇ ಸಾಹಸ ಎಂಬ ನಮ್ಮ ಅಷ್ಟು ದಿನದ ನಂಬಿಕೆ ನಮ್ಮಿಂದ ಕಳಚಿ ಬೀಳುವ ಮೊದಲೇ ಹೊಸವಿಷಯಗಳನ್ನು ಸತ್ಯ ಎಂದು ನಂಬಿಬಿಟ್ಟೆವು.

      'ಕ್ರಾಂತಿ' ಎಂಬೊಂದು ಭೂತ ಬೇತಾಳದಂತೆ ಬೆನ್ನು ಏರಿದ ಮೇಲೆ ಪ್ರತಿಯೊಬ್ಬರೂ ವಿಕ್ರಮರೇ. ಆಗಿಂದ ಚಾಚಾ ಬಗ್ಗೆ ಇದ್ದ ಅಲ್ಪ ಸ್ವಲ್ಪ ವಿಶ್ವಾಸವೂ ಮರೆಗೆ ಸರಿಯಿತು. ಜೊತೆಜೊತೆಗೆ ಗಾಂಧೀಜಿಯವರ ಕುರಿತೂ ಸಹ. ಮುಂದೆ ಅವರನ್ನು ಪ್ರೀತಿಯಿಂದ ಕರೆಯುತ್ತಿದ್ದ ಹೆಸರುಗಳು ಮರೆತೋಗಿ, ಅಥವಾ ಉದ್ದೇಶಪೂರ್ವಕವಾಗಿ ಮರೆತು, ಇಲ್ಲವೇ ಮರೆತಂತೆ ನಟಿಸುತ್ತಾ ಬದುಕಿದ ನಮಗೆ ಕನಿಷ್ಟಪಕ್ಷ ಅವರ ವಯಸ್ಸಿಗಾದರೂ ಬೆಲೆಕೊಡಬೇಕೆಂಬ ಔದಾರ್ಯವೂ ಉಳಿಯಲಿಲ್ಲ. ಮುಂದಿನ ದಿನಗಳಲ್ಲಿ ಅವರನ್ನ ಯಾವೆಲ್ಲಾ ಬೈಗುಳಗಳಿಂದ ಬೈದಿದ್ದೇವೆನ್ನುವುದು ಈಗ ಲೆಕ್ಕಕ್ಕೂ ಸಿಗದು. ದೇಶಕ್ಕೆ ೧೯೪೭ರಷ್ಟು ತಡವಾಗಿ ಸ್ವಾತಂತ್ರ್ಯ ಸಿಗಲೂ ಇವರಿಬ್ಬರೇ ನೇರ ಹೊಣೆ ಎಂದು ಎಲ್ಲರೆದುರು ಹೇಳಿಕೊಳ್ಳಲು ನಾವೆಷ್ಟು ಹೆಮ್ಮೆ ಪಟ್ಟಿಲ್ಲ? ನಾವು ಮಾತಿನಲ್ಲಿ ವ್ಯಕ್ತಪಡಿಸುತ್ತಿದ್ದ ಆಕ್ರೋಶ ಎಷ್ಟಿತ್ತೆಂದರೆ ಒಬ್ಬೊಬ್ಬರೂ ಒಂದೊಂದು ಬಾರಿ ಅವರನ್ನು ಕೊಂದು ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಡುತ್ತೇವೆನ್ನುವಷ್ಟು.

      ಇಷ್ಟಕ್ಕೂ ನೆಹರೂ ಬಗ್ಗೆ ನಮ್ಮ ಅಭಿಪ್ರಾಯಗಳು ಅಷ್ಟು ಸುಲಭವಾಗಿ ಬದಲಾಗಿದ್ದಾದರೂ ಯಾಕೆ ಗೊತ್ತಾ..? ಯಾವುದೇ ಸಂದರ್ಭಗಳಲ್ಲಿ ನಾವಿರಿಸಿದ್ದ ನಂಬಿಕೆ, ನಾವು ವ್ಯಕ್ತಪಡಿಸುತ್ತಿದ್ದ ಅಭಿಪ್ರಾಯಗಳು ನಮ್ಮ ಸ್ವಂತದ್ದಾಗಿರಲಿಲ್ಲ. ಮೊದಲು ನಮ್ಮ ಗುರುಗಳ ಮೇಲಿನ ಶ್ರದ್ಧೆ, ಭಕ್ತಿ ಅವರ ಮಾತನ್ನು ನಂಬುವಂತೆ ಮಾಡಿತು. ಮುಂದೆ ಅನೇಕ ಭಾಷಣಕಾರರು ಮಂಡಿಸಿದ ವಾದ, ಅವರ ಮಾತಿನ ವೈಖರಿ ನಮಗೆ ಮೆಚ್ಚಿಗೆಯಾಗಿ ಅವರಾಡಿದ್ದೆಲ್ಲಾ ಸತ್ಯ ಎಂಬ ನಂಬಿಕೆ ನಾವು ತಾಳಿದೆವು. ಅದು ಆಳವಿಲ್ಲದ ಶ್ರದ್ಧೆ, ನೀರ ಮೇಲಣ ಗುಳ್ಳೆ. ಸಮುದ್ರದ ಆಳವೆಷ್ಟೆಂದು ದಡದಲ್ಲಿ ಕುಳಿತವನಲ್ಲಿ ಕೇಳಿದರೆ ಆತ ಏನೆಂದಾನು!? ಯಾರಿಂದಾದರೂ ಕೇಳಿ ತಿಳಿದಿದ್ದನ್ನಷ್ಟೇ ಅಲ್ವೇ.? ಅದನ್ನೇ ಸಮುದ್ರದ ಆಳ ಎಂದರೆ ಹೇಗಾದೀತು!? ನಮ್ಮಷ್ಟೇ ಅಲ್ಲವೇ.?

      ಇನ್ನಾದರೂ ಚಾಚಾ.. ಛೀ..ಛೀ.. ಮರೆಯುವ; ಇಲ್ಲದ ಗುಣಗಳನ್ನು ಹೊಗಳುವುದೂ ಬೇಡ; ಸಲ್ಲದ ಆರೋಪಗಳನ್ನು ಹೊರಿಸಿ ತೆಗಳುವುದೂ ಬೇಡ. ಗೊತ್ತಿಲ್ಲದಿರುವ ವಿಷಯಕ್ಕೆ 'ಯಾವುದೋ ಊರಿನ ಅಜ್ಜಿಯ ಅಜ್ಜಿ ಹೀಗೆನ್ನುತ್ತಿದ್ದರು' ಎಂಬ ಸಾಕ್ಷ್ಯ ನೀಡಿ ನಂಬಿಸುವುದಕ್ಕಿಂತ 'ನಮಗೆ ಗೊತ್ತಿಲ್ಲ' ಎಂದು ಒಪ್ಪಿಕೊಳ್ಳೋಣ. ಅಳಿದವರನ್ನು ಹಳಿಯುವುದರಲ್ಲಿ ಕಾಲಹರಣಗೈಯುವ ಬದಲು ಉಳಿದಿರುವವರು ಬಾಳುವ ಬಗೆಯನ್ನು ಯೋಚಿಸುವ. ಏನಂತೀರಿ ?

(ಸೂಚನೆ : ನನಗೆ ತೋಚಿದ ಅಭಿಪ್ರಾಯಗಳನ್ನು ಮಂಡಿಸುವಾಗ ಇದೇ ತೆರನಾದ ಯೋಚನೆಗಳು ಬರೀ ನನಗಷ್ಟೇ ಬಂದಿರದು ಎಂದು ತೋರಿ ನನಗೇ ಗೊತ್ತಿರದ ಆ ಇನ್ನೊಬ್ಬರ ಅಭಿಪ್ರಾಯವೂ ಸೇರಿ ಇದು ನಮ್ಮ ಅಭಿಪ್ರಾಯ ಎಂದು ಬರೆದಿದ್ದೇನೆ)

Sunday 10 November 2013

ಕಾನೂನು ಕಟ್ಟಳೆಗಳಿಂದ ಜನರ ಮನಸ್ಸನ್ನು ಬದಲಾಯಿಸುವುದು ಸಾಧ್ಯವೇ?

      ಅಂಧಶ್ರದ್ಧೆ ಮಾನವನ ಹುಟ್ಟುಗುಣ. ಆದರೆ ಸುಟ್ಟರೂ ಹೋಗದಂಥದ್ದೇನಲ್ಲ. ವಿವೇಚನೆಯ ಕಿಚ್ಚು ಹಚ್ಚಿದ್ದಾದರೆ ಅದು ಕಡಿಮೆಯಾಗುವುದುಂಟು. ಸುಟ್ಟ ಬೀಜ ಮೊಳಕೆಯೊಡೆಯುವುದಿಲ್ಲವಷ್ಟೇ. ಆದರೆ ಬುದ್ಧಿಗೆ ಯೋಚಿಸುವ ತಾಪತ್ರಯವೇ ನೀಡಿಲ್ಲವಾದರೆ ಒಳಗಿನ ಅಂಧಶ್ರದ್ಧೆ ಹಾಗೆಯೇ ಬೆಳೆದು, ತಾನು ನಂಬಿದ್ದೊಂದೇ ಸತ್ಯ ಎಂದು ತೋರುವುದುಂಟು.

      ಅಂಧಶ್ರದ್ಧೆ ಬೆಳೆಯಲು ಇನ್ನೊಂದು ಕಾರಣವೆಂದರೆ ನಮಗೆ ಗೊತ್ತಿಲ್ಲದಿರುವ ವಿಚಾರಗಳನ್ನು ಗೊತ್ತಿಲ್ಲ ಎನ್ನಲು ಅಂಜುವುದು. ಅದರ ಬದಲಾಗಿ ನಾವು ನಂಬಿರುವ ಯಾರೋ ಹೇಳಿದ ವಿಚಾರಗಳನ್ನು ಹೇಳಿ 'ಅದು ಹಾಗೆ, ಇದು ಹೀಗೆ' ಎಂದಂದು ತಮ್ಮ ವಾದದಲ್ಲಿ ತಾವು ಗೆದ್ದೆವೆಂದು ಬೀಗುವುದು. ವ್ಯಕ್ತಿ ತನಗೆ ಗೊತ್ತಿಲ್ಲದ ವಿಚಾರಗಳಲ್ಲಿ ಕುತೂಹಲ ತಾಳಿ ಅವನ್ನು ಕಲಿಯಲೆತ್ನಿಸುವುದೆಂದರೆ ಅದು ಖರ್ಚಿನ ಕೆಲಸ. ತನ್ನ ಬುದ್ಧಿಯನ್ನೂ, ಸಮಯವನ್ನೂ ವೆಚ್ಚ ಮಾಡಬೇಕು. ಅದಕ್ಕಿಂತ ವೇದಗಳು, ಪುರಾಣಗಳು ಹೇಳಿದವು ಎಂದು ಹೇಳಿ ಬಾಯಿ ಮುಚ್ಚಿಸುವುದು ಸುಲಭವಲ್ಲವೇ. ಒಂದುವೇಳೆ ತಿರುಗಿ ಅವರು ವೇದಗಳನ್ನು ಓದಿದ್ದಾರೆಯೇ ಎಂದು ಕೇಳಿದ್ದೇ ಆದರೆ ಅವರು ಕೇಳಿಯಾರು 'ನನಗೆ ಆ ಸ್ವಾಮೀಜಿ ಹೇಳಿದ್ದು, ಆ ಮಹಾನುಭಾವರು ಹೇಳಿದ್ದು, ನಿಮ್ಮ ಅರ್ಥದಲ್ಲಿ ಏನು ಅವರು ಹೇಳಿದ್ದು ಸುಳ್ಳೋ' ಎಂದು. ಒಟ್ಟಿನಲ್ಲಿ ನಾನು ಸರಿ. ನನಗೆ ಹೇಳಿದವರೇ ತಪ್ಪು ಹೇಳಿದ್ದರೆ ವಿಚಾರ ಮಾಡದೆ ನಂಬಿದ ನನ್ನ ತಪ್ಪಲ್ಲ.

      ಇಂತಿಪ್ಪ ಸಮಾಜದಲ್ಲಿ ನೀವು ಯಾವುದೇ ಮಾತಿನಿಂದ ಮತ್ತೊಬ್ಬನ ನಂಬಿಕೆಗಳನ್ನು ಬದಲಾಯಿಸುವುದು ಸಾಧ್ಯವಿಲ್ಲ. ಅದನ್ನು ನಂಬಿದವ ಎಂಥ ಮೂಢನೇ ಇರಲಿ ನೀವೇ ಸೋಲೊಪ್ಪಿಕೊಂಡು ಇಂದಿನ ಕಾಲಕ್ಕೆ ಅಪ್ರಸ್ತುತ ಎನಿಸಿದ ನಂಬಿಕೆಯನ್ನೇ ಮೂಢ ಎಂದು ಕರೆದು ನಾನೂ ಗೆಲ್ಲಬಲ್ಲೆ ಎಂದು ತೋರಿಸಿಕೊಂಡರಾಯ್ತು. ಗೆಲ್ಲುವ ಹಟದಲ್ಲಿ ರೂಢಿಯಿಂದ ಬಂದಂಥ ನಂಬಿಕೆಯೊಂದನ್ನ ಮೂಢ ಎಂದಂದು ತಮ್ಮ ತಮ್ಮ ಮೌಢ್ಯವನ್ನೂ ಜಾಹೀರುಪಡಿಸಿಕೊಂಡರಾಯ್ತು. ಆದರೆ ಬರಿಯ ಮಾತಿನಿಂದಾಗದ್ದು ಕಾನೂನು ಕಟ್ಟಳೆಗಳಿಂದ ಸಾಧ್ಯವೇ?

      ಒಂದಿಷ್ಟು ನಂಬಿಕೆಗಳಿಗೆ ಮರಣಶಾಸನ ಬರೆಯುವ ಇಂಥ ಒಂದು ಉಮೇದು ರಾಜ್ಯದ ಮಾನ್ಯ ಮುಖ್ಯ ಮಂತ್ರಿಗಳಿಗೆ ಬಂದಿದ್ದೂ ಆಯ್ತು. ಕಾನೂನು ಕಾಯಿದೆಗಳಿಂದ ಭ್ರಷ್ಟಾಚಾರ, ಅಪರಾಧಗಳನ್ನಂತೂ ಕಡಿಮೆ ಮಾಡಲಾಗಲಿಲ್ಲ. ಜನರ ನಂಬಿಕೆಗಳನ್ನೇ ಬದಲಿಸುವ ಎಂಬ ಹುಮ್ಮಸ್ಸು. ಸಾಮೂಹಿಕ ಆಚರಣೆಗಳ ವೇಳೆ ಮಾಡಿ-ಮೈಲಿಗೆ ನೆಪದಲ್ಲಿ ಯಾವುದೇ ಜಾತಿಯ ಜನರನ್ನು ಹೊರಗಿಡುವ, ಪಂಕ್ತಿಭೇದ ಮಾಡುವ ಸಂಪ್ರದಾಯದಿಂದಾಗಿ ಸಮಾಜದಲ್ಲಿ ಮೇಲು-ಕೀಳೆಂಬ ಭೇದ ಭಾವ ಇದೆ ಎಂದು ನಂಬಿರುವವರು ಅವರು.  ಪಾಪ, ಸರ್ಕಾರದ ನೀತಿಗಳಲ್ಲೇ ಪರಿಶಿಷ್ಟ ವರ್ಗಗಳನ್ನು ಹೊರತುಪಡಿಸಿ ಮತ್ತೆಲ್ಲರೂ ಸ್ಥಿತಿವಂತರೆಂದು ನಂಬಿರುವುದು ಕಾಣಿಸಲೇ ಇಲ್ಲ. ಹೋಗಲಿ ಬಿಡಿ ಅವರ ವಿಷಯ ನಮಗ್ಯಾಕೆ ? ಆದರೆ ನನ್ನ ಪ್ರಶ್ನೆ ಇದ್ದಿದ್ದು 'ಕಾನೂನು ಕಟ್ಟಳೆಗಳಿಂದ ಜನರ ಮನಸ್ಸನ್ನು ಬದಲಾಯಿಸುವುದು ನಿಜವಾಗಿಯೂ ಸಾಧ್ಯವೇ?' ಎಂದಲ್ಲವೇ. ಹಾಗಾಗಿ ಒಂದಿಷ್ಟು ಹೇಳಬೇಕಾಯ್ತು.

      ಒಂದು ವಿಷಯ ಕೇಳಿ. ನಮ್ಮ ದೇಶದಲ್ಲಿ ಮೊದಲಿಂದಲೂ ಕಸುಬಿನ ಹೆಸರಲ್ಲಿ ಕಟ್ಟಿಕೊಂಡ ಜಾತಿಗಳೂ; ಜಾತಿಗಳ, ದೇವರುಗಳ ಹೆಸರಲ್ಲಿ ಕಟ್ಟಿಕೊಂಡ ಧರ್ಮಗಳೂ ರಾಜಕೀಯ ಶಕ್ತಿಯ ಬಲದಿಂದಲೇ ಬೆಳೆದವುಗಳು, ಉಳಿದವುಗಳು. ಇಂತಿಂಥಾ ರಾಜ ಇಂತಿಂಥಾ ದೇವಾಲಯಗಳನ್ನು ಕಟ್ಟಿಸಿದ ಎಂದೋ, ಇಂತಿಂಥಾ ದೇವಾಲಯಗಳಿಗೆ ಅನುದಾನವನ್ನಿತ್ತ ಎಂದೋ ಚಿಕ್ಕಂದಿನಲ್ಲಿ ಸಮಾಜ-ವಿಜ್ಞಾನ ಪಾಠ ಪುಸ್ತಕದ ಇತಿಹಾಸದ ವಿಭಾಗದಲ್ಲಿ ಓದಿಯೇ ಇರುತ್ತೀರಿ. ಆದರೆ ಒಂದೇ ಪ್ರದೇಶದ ಜನರಲ್ಲಿ ಬೇರೆ ಬೇರೆ ರಾಜರ ಆಳ್ವಿಕೆಯಲ್ಲಿ, ಬೇರೆ ಬೇರೆ ಧರ್ಮದ ನಂಬಿಕೆಗಳನ್ನು ಹೇರುವುದು ಹೇಗೆ ಸಾಧ್ಯವಾಯಿತು ? ಬರಿಯ ಬಾಯಿ ಮಾತಿನಿಂದ ಜನರು ಹೊಸ ಮತಗಳನ್ನು ಒಪ್ಪಿಕೊಂಡರೇ? ಅದಂತೂ ಸುತಾರಾಂ ಸಾಧ್ಯವಿಲ್ಲ. ಹಾಗಾದರೆ ಇಂದು ನಮ್ಮಲ್ಲಿರುವ ಎಷ್ಟೋ ಧಾರ್ಮಿಕ ನಂಬಿಕೆಗಳು ಯಾವುದೋ ರಾಜಕೀಯ ಶಕ್ತಿಗಳು ಇಂತಹ ಕಾನೂನುಗಳನ್ನು ತಂದಿದ್ದರ ಫಲವೇ ಎಂಬ ಅನುಮಾನವೂ ಮೂಡುವುದುಂಟು. ಇದಕ್ಕೆ ಉತ್ತರ ಪಡೆಯಲೆತ್ನಿಸಿದರೆ ಮತ್ತದೇ 'ಈ ಧರ್ಮದ ಮೇಲಾದ ಅತ್ಯಾಚಾರ ಅದು, ಪರಧರ್ಮೀಯರನ್ನು ಓಲೈಸುವ ತಂತ್ರ' ಎಂದು ತಾವು ಕಣ್ಣು ಮುಚ್ಚಿ ಕಂಡ ರಾಜಕೀಯ ಪಕ್ಷಗಳ ಗುಣಗಳನ್ನು ಕುರಿತು ಭಾಷಣ ಬಿಗಿಯುವವರು ಸಿಕ್ಕಾರೇ ವಿನಃ ಒಬ್ಬನ ವ್ಯಕ್ತಿ ಸ್ವಾತಂತ್ರ್ಯದ ಬಲಿ ಎಂದು ಯಾರಿಗೂ ತೋರದು.

      ಆದರೆ ಏನೇ ಹೇಳಿ, ಕಾಯಿದೆ ಬಂದರೂ, ಬಿಟ್ಟರೂ, ಕಾಯಿದೆಗಳಿಂದ ಜನ ಬದಲಾದರೂ, ಆಗದಿದ್ದರೂ ಸೋಲು ಮಾತ್ರ ಜನರದ್ದೇ. ಯಾಕೆ ಗೊತ್ತಾ, ಬದಲಾದರೆ ತಾವು ಗೆದ್ದೆವೆಂದು ಇಲ್ಲವಾದರೆ ತಾವು ಸರ್ವ ಧರ್ಮ ಸಹಿಷ್ಣುಗಳೆಂದು ಸೋಗು ಧರಿಸಿದವರು ಹಿಂದಿನವರು. ಈಗಿನವರಿಗೆ ಇಷ್ಟು ಮಾಡಲೂ ತಿಳಿಯದಿದ್ದೀತೇ ?

Sunday 22 September 2013

ಭಂಡಾರಧಾರ ಪ್ರವಾಸ ಕಥನ.. : ಅಧ್ಯಾಯ ೬

Truth and Dare, ಲವ್ವು - ಕ್ರಶ್ಶು - ದೇಶಸೇವೆ ಇತ್ಯಾದಿ..

      ಚಿಕ್ಕದಾಗಿದ್ದ ಗುಡಿಯನ್ನು ನೋಡಲು ಬಹಳ ಹೊತ್ತು ಹಿಡಿಯಲಿಲ್ಲ. ಪ್ರಚಾರಪ್ರಿಯನಲ್ಲದವನನ್ನು ನೋಡಲು ಎಷ್ಟು ಜನ ಬಂದಾರು.!? ಅಲ್ಲಿಯ ಜನರೂ ಮುಗ್ಧರು. ದೇವರ ಹೆಸರಲ್ಲಿ ದಂಧೆ ನಡೆಸಲು ಬರದವರು. ಹಾಗಾಗಿ ಅಲ್ಲಿಂದ ಬೇಗನೆ ಹೊರಡಲು ಅನುಕೂಲವಾಯಿತು. ಸಮೀಪದಲ್ಲಿದ್ದ ಕೋಟೆ ನೋಡುವ ಮಾನಸಿಕ ಹಂಬಲ, ದೈಹಿಕ ಶಕ್ತಿ ಎರಡೂ ನನ್ನಲ್ಲಿತ್ತಾದರೂ ಉಳಿದೆಲ್ಲರಲ್ಲೂ ಕನಿಷ್ಠಪಕ್ಷ ಎರಡರಲ್ಲೊಂದು ಇದ್ದಂತಿರಲಿಲ್ಲ. ಒಂದಿಬ್ಬರು ಹೇಗಾದರೂ ಸರಿ ಎಂದರಾದರೂ ಸ್ಪಷ್ಟ ಅಭಿಪ್ರಾಯ ತಿಳಿಸದೇ ಇದ್ದುದರಿಂದ ನನ್ನ ಪರವಾಗಿದ್ದಿದ್ದು ನನ್ನದೊಂದೇ ಮತ. ಪ್ರಜಾಪ್ರಭುತ್ವದ ನಾಡಿನಲ್ಲಿ ಹೆಚ್ಚು ಮತಗಳನ್ನು ಪಡೆದವರು ನಡೆದಂತೆ ನಾವೂ ನಡೆಯಬೇಕು. ಅವರು ಭ್ರಷ್ಟರಾದರೆ ನಾವೂ ಭ್ರಷ್ಟರಾಗಬೇಕು. ಯಾಕಂದ್ರೆ ಭ್ರಷ್ಟತನ ಬೇಕೆಂಬ ಕಾರಣಕ್ಕೇ ಅಲ್ವಾ ಅವರಿಗೆ ವೋಟು ಹಾಕಿದ್ದು. ಆದರೆ ಜನರಿಗೆ ತಿಳುವಳಿಕೆ ಇಲ್ಲ, ತಾವೇ ಬುದ್ಧಿವಂತರು, ಜನಗಳ ಮನದಲ್ಲಿ ಹೊಸ ಅರಿವಿನ ಬೀಜ ಬಿತ್ತಿ ಹೆಮ್ಮರವಾಗಿಸುವವರು ಎಂದು ಜನನಾಯಕರು ಅಂದುಕೊಂಡಷ್ಟು ದಿನ ಇದು ಹೀಗೆಯೇ ಸಾಗುವಂಥದ್ದು. ಅದರ ಬಗ್ಗೆ ಹೆಚ್ಚಿನ ಮಾತೇಕೆ ? ಉಳಿದವರೆಲ್ಲರ ಆಶಯದಂತೆ ಅಲ್ಲಿಂದ ಮರಳುವ ನಿಶ್ಚಯವಾಯ್ತು. ಮನಸ್ಸು ಹಸಿದು ಸತ್ತರೆ ಕೇಳುವವರಿಲ್ಲ, ಕೊರಡು ದೇಹದ್ದೇ ಚಿಂತೆ. ನೆನಪಿರಲಿ, 'ನೊಂದಾಗಲಷ್ಟೇ ಈ ದೇಹ ನಶ್ವರ, ಜಗತ್ತು ಮಾಯೆ, ಸುಖದಿಂದಿರುವಾಗಲಲ್ಲ'.

      ಮರಳಿ ಹೊರಟಾಗ ಗಾಡಿಯಲ್ಲಿ 'Truth and Dare' ಆಟ ಶುರುವಾಗಿತ್ತು. ಇದೊಂಥರ 'ಸಂಗೀತ ಕುರ್ಚಿ'ಯಂಥದೇ ಆಟ. ಅಲ್ಲಿ ಸಂಗೀತ ಶುರುವಾದೊಡನೆ ಕುರ್ಚಿಗೆ ಸುತ್ತು ಬರತೊಡಗಿ, ಸಂಗೀತ ನಿಂತೊಡನೆ ಕುರ್ಚಿಯಲ್ಲಿ ಕೂತವನು ಗೆದ್ದ, ಸಿಗದವನು ಸೋತ. ಆದರಿಲ್ಲಿ ಇದರ ವಿರುದ್ಧ. ಸಂಗೀತ ಶುರುವಾದೊಡನೆ ಸರದಿಯಂತೆ ಒಬ್ಬೊಬ್ಬ ಕೂತು, ಎದ್ದು ಹೋಗುತ್ತಿರಬೇಕು. ಸಂಗೀತ ಮುಗಿಯುವ ವೇಳೆಗೆ ಯಾರು ಕುಳಿತಿರುವನೋ ಅವನು ಸೋತಂತೆ. ಗೆದ್ದಾತ ಗೆಲುವಿನ ಸಂತೋಷದಿಂದ ಬೀಗುತ್ತಿರಬೇಕಾದರೆ, ಸೋತವನಿಗೆ ಸೋಲಿನ ಶಿಕ್ಷೆ ಸಾಲದೆಂಬುದಕ್ಕೆ, ಮತ್ತೊಂದು ಶಿಕ್ಷೆಯ ಬರೆ. ಅವನ ಮುಂದೆ ಎರಡು ಆಯ್ಕೆಗಳಿರುತ್ತವೆ. Truth and Dare.
     
      ಸೋತವನ ಆಯ್ಕೆ Truth ಆದರೆ ಉಳಿದೆಲ್ಲರೂ ಸೇರಿ ಕೇಳಿದ ಪ್ರಶ್ನೆಗೆ ಆತ ಸತ್ಯವಾದ ಉತ್ತರ ನೀಡಬೇಕು. ಆಯ್ಕೆ Dare ಎಂದಾದರೆ, ಉಳಿದೆಲ್ಲರೂ ಹೇಳಿದ ಕೆಲಸ ಮಾಡಲು ಆತ ಧೈರ್ಯ ತೋರಬೇಕು. ಆದರೆ ಒಂದು ಸಂಗತಿ ಸತ್ಯವೋ, ಸುಳ್ಳೋ ಎಂದು ತಿಳಿಯುವುದಾದರೂ ಹೇಗೆ ? ವಿಜ್ಞಾನ ಎಷ್ಟೇ ಮುಂದುವರಿದರೂ, ಸುಳ್ಳು ಪತ್ತೆ ಹಚ್ಚುವ ಯಂತ್ರ ಕಂಡುಹಿಡಿದರೂ 'ಇದು ಸತ್ಯ' ಎಂದು ಒಂದನ್ನು ತೋರಿಸಲು ಸಾಧ್ಯವೇ? ಕೊನೆಗೆ ಎಷ್ಟೆಂದರೂ ಒಂದು ಸಂಗತಿ ಸತ್ಯ ಅಥವಾ ಸುಳ್ಳುಗಳೆಂದು ನಿರ್ಧಾರವಾಗುವುದು ಕೇಳುವವನಿಗೆ ಆ ವಿಷಯಗಳು ಮೊದಲೇ ಗೊತ್ತಿದ್ದರೆ, ಅಥವಾ ಆತ ಕೇಳುವ ವಿಚಾರದಲ್ಲಿ ಹೊಂದಿರಬಹುದಾದ ನಂಬಿಕೆಯ ಮೇಲೆಯೇ ಅಲ್ಲವೇ ?

      ಸತ್ಯ ಸುಳ್ಳುಗಳ ಸಂಗತಿ ಹಾಗಿರಲಿ,ಈ ಆಟವನ್ನ ಕುರ್ಚಿಯ ಮೇಲೆ ಕೂತೆದ್ದು ಆಡುವುದಿಲ್ಲವಾದರೂ ಎರಡೂ ಆಟಗಳ ಸಾಮ್ಯತೆಯಲ್ಲಿರುವ ವಿರೋಧವನ್ನೋ, ವಿರೋಧದಲ್ಲಿರುವ ಸಾಮ್ಯತೆಯನ್ನೋ ತಿಳಿಸುವ ಪ್ರಯತ್ನವಾಗಿ ಹೇಳಿದೆ ಅಷ್ಟೇ. ನೀರಿನ ಬಾಟಲಿಯನ್ನು ಹಸ್ತಾಂತರಿಸುತ್ತಲೋ, ಸಂಗೀತವೂ ಇಲ್ಲದೆ ಲೇಖನಿಯಿಂದನ್ನು ತಿರುಗಿಸುತ್ತ ಅದರ ತುದಿ ಯಾರ ಮುಖ ನೋಡುವುದೋ ಅವರು ಸೋತರೆಂದೋ ನಿಮ್ಮಲ್ಲಿ ಲಭ್ಯವಿರುವ ಪರಿಕರಗಳಿಗೆ ತಕ್ಕಂತೆ ನಿಯಮಗಳನ್ನು ಬದಲಾಯಿಸಿಕೊಂಡು ಆಡಬಹುದು.

      ಆದರೆ ಎಲ್ಲರಿಗೂ ಸತ್ಯ ತಿಳಿಯುವ ಕಾತುರತೆಯಿದ್ದದ್ದು, ಸೋತವನಿಗೆ ಎಷ್ಟು ಜನ ಸ್ನೇಹಿತೆಯರಿದ್ದರು ? ಅವರಲ್ಲಿ ಎಷ್ಟು ಜನ ಪ್ರೇಯಸಿಯರು ? ಮೊದಲ ನೋಟಕ್ಕಷ್ಟೇ ಇಷ್ಟವಾಗಿ ಈಗ ನಿಕೃಷ್ಟ ಎನಿಸಿರುವವರು ಎಷ್ಟು ಮಂದಿ? ಈಗಲೂ ಕನಸಿನಲ್ಲಿ ಬಂದು ಕಾಡುವವರೆಷ್ಟು ? ನಮ್ಮಲ್ಲಿ ಆತನಿಗೆ ಯಾರು ಇಷ್ಟ ? ಇದರ ಜೊತೆಗೆ ಪ್ರತಿಯೊಂದಕ್ಕೂ ಒಂದೊಂದು ಹೆಸರು ಬೇರೆ. Crush, Infatuation, Love ಇನ್ನೂ ಏನೇನೋ. ಹುಡುಗಿಯರ ವಿಷಯದಲ್ಲೂ ಹುಡುಗರಿಗೆ ಇದೇ ಕುತೂಹಲ. ಆಕೆಗೆ ಈ ಹಿಂದೆ ಎಷ್ಟು ಜನ Boy Friendsಗಳಿದ್ರು ? ಈಗೆಷ್ಟು ? ಉತ್ತರ ಹೇಳುವ ಉತ್ಸಾಹದಲ್ಲಿ ಸತ್ಯವೆಷ್ಟೋ ? ಸುಳ್ಳೆಷ್ಟೋ ? ಆದರೆ ಎಲ್ಲರ ಬದುಕೂ ಒಂದೇ ತೆರನಾಗಿ ನಡೆಯುತ್ತಿತ್ತೆಂದು ಮಾತ್ರ ಬೇಡ ಎಂದರೂ ಕಿವಿಗೆ ಕೇಳಿಸುತ್ತಿತ್ತು.

      ಇನ್ನು ಇವರು ಬಯಸುತ್ತಿದ್ದ ಧೈರ್ಯವೂ ಅಷ್ಟೇ, ಹಳೇ Girl Friend ಹೆಸರನ್ನ ಜೋರಾಗಿ ಕೂಗು, ಇಲ್ಲಿ ಇದ್ದವರಲ್ಲೇ ಯಾರಲ್ಲಾದರೂ ಪ್ರೀತಿ ಬೇಕೆಂದು ಅಂಗಲಾಚು, ಇಂಥವೇ. ಇದು ಆಟ, ಇದನ್ಯಾಕೆ ಅಷ್ಟು ಗಂಭೀರವಾಗಿ ತಗೋತೀಯಾ ಅಂತ ನನ್ನ ನೀವು ಕೇಳಿದ್ರೆ, ಎಷ್ಟೋ ಜನ ಜನ್ಮ ಜನ್ಮಾಂತರದ್ದು, ಪರಮ ಪವಿತ್ರವಾದದ್ದು ಎಂತೆಲ್ಲಾ ಕರೆಯೋ ಪ್ರೀತಿ ಕೇವಲ ಒಂದು ಆಟದ ವಸ್ತುವೇ ಅನ್ನೋದು ನನ್ನ ಪ್ರಶ್ನೆ.
ಇನ್ನು ಆಟ ಗಂಭೀರ ಸ್ವರೂಪದ್ದೇ ಆದರೆ, ಇದಕ್ಕಿಂತ ಗಂಭೀರ ವಿಚಾರಗಳೇನೂ ಇಲ್ವಾ ಅನ್ನೋದು ಇನ್ನೊಂದು ಪ್ರಶ್ನೆ.

      Crush, Infatuation, Love ಇವುಗಳಲ್ಲಿರುವ ಸಾಮ್ಯತೆಯಾಗಲೀ, ವ್ಯತ್ಯಾಸವಾಗಲೀ ಸರಿಯಾಗಿ ಗೊತ್ತಿಲ್ಲದ ನಾನು ಇದರ ಬಗ್ಗೆ ಜಾಸ್ತಿ ಹೇಳಲಾರೆ. ಆದರೆ ಪ್ರತಿಯೊಂದು ಹಂತದಲ್ಲಿಯೂ ಒಬ್ಬೊಬ್ಬ ವ್ಯಕ್ತಿಗೆ ಮನಸ್ಸು ಮಾರಿಕೊಂಡು ಬದುಕುವುದಕ್ಕೆ ಏನಂತ ಕರೀತೀರಿ ? ದೇಹ ಮಾರಿಕೊಂಡು ಬದುಕುವುದು ವೇಶ್ಯಾವಾಟಿಕೆ, ಸೂಳೆಗಾರಿಕೆ ಅಂದಂತೆ ಇದಕ್ಕೂ ಒಂದು ಹೆಸರಿರಬಹುದಲ್ಲವೇ ? ತಿಳಿದಿದ್ದರೆ ದಯವಿಟ್ಟು ಹೇಳಿ. ನನಗೆ ಇನ್ನೊಂದು ಅನ್ನಿಸುವುದೇನೆಂದರೆ, ಇಂಥ ಮನಸ್ಸು ಮಾರಿಕೊಂಡು ಬದುಕುವ ಕಾಲ ಬರಬಾರದೆಂಬುದಕ್ಕೇ ಬಾಲ್ಯವಿವಾಹ, ಸತಿ ಸಹಗಮನ ಮುಂತಾದ ಕಟ್ಟುಪಾಡುಗಳು ಶುರುವಾಗಿ, ಅದನ್ನು ಅರ್ಥೈಸಿಕೊಳ್ಳಲು ಬಾರದೆ ಇಂದು ಸಮಾಜ ಸುಧಾರಣೆಯಾಯಿತೋ ಹೇಗೆ ಅಂತ.

      ಇಷ್ಟೆಲ್ಲಾ ಮಾತುಗಳು ಬರೀ ನನ್ನೊಳಗೇ ನಡೆದಿದ್ದು. ನನ್ನ ಪ್ರೌಢಶಾಲಾ ಶಿಕ್ಷಣದ ಸಂದರ್ಭದಲ್ಲಿ ಹತ್ತಿದ್ದ ಸಂನ್ಯಾಸದ ಮೋಹದಿಂದಲೋ, ಪದವಿ ಪೂರ್ವ ಶಿಕ್ಷಣದ ಸಂದರ್ಭದಲ್ಲಿ ಹತ್ತಿದ್ದ ದೇಶಸೇವೆಯ ಆಶೆಯಿಂದಲೋ ಬೇರೆಲ್ಲಾ ವಿಚಾರಗಳ ಕುರಿತು ಯೋಚಿಸಿದ್ದು ತುಂಬಾ ಕಮ್ಮಿ. ಪದವಿ ಶಿಕ್ಷಣದ ಸಂದರ್ಭದಲ್ಲೂ ಎಷ್ಟೋ ರಾತ್ರಿಗಳಲ್ಲಿ 'ಆಜಾದ್' ಎಂಬ ಗುಂಪು ಕಟ್ಟಿಕೊಂಡು, ಸುತ್ತ ಮುತ್ತಲ ಊರುಗಳಲ್ಲಿ ಜನ ಜಾಗೃತಿ ಕೈಗೊಳ್ಳಬೇಕು, ಶ್ರಮದಾನಗೈಯಬೇಕು ಎಂದೆಲ್ಲಾ ಕನಸು ಕಂಡಿದ್ದುಂಟು. ಆದರೆ ಈಗೀಗ ಈ ಎಲ್ಲಾ ಹುಚ್ಚುತನ ಕೊಚ್ಚಿಹೋಗಿ, ನಾಳಿನ ಕನಸು ಕಾಣುವ ಭರದಲ್ಲಿ ಇಂದಿನ ಸೊಗವನ್ನು ಮರೆಯಬಾರದೆಂಬ ಬುದ್ಧಿ ಬಂದಿದೆ. ನಾಳೆಯ ಕನಸು ಕಾಣುವವನು ನಾಳೆ ಬಂದಾಗ ನಾಡಿದ್ದಿನ(ನಾಳೆಯ ನಾಳೆ)ಕನಸು ಕಾಣುವಲ್ಲಿ ಮಗ್ನನಾದಾನು, ಆದರೆ ಇಂದಿನ ಬಗ್ಗೆ ಯೋಚಿಸುವವನು ನಾಳೆಯೂ (ನಾಳೆಯ ಇಂದು) ಖುಷಿಯಿಂದ ಬದುಕಿಯಾನು ಎಂಬ ಸತ್ಯದ ಅರಿವಾಗಿದೆ. ಹಾಗೆಯೇ, ಹೇಗೆ ನನ್ನ ಮನೆಯ ಕೆಲಸ ನಾನು ಮಾಡಿದರೆ ನಾನು ಮನೆಸೇವೆ ಮಾಡಿದೆ ಅಂತ ಹೇಳುವುದಿಲ್ಲವೋ, ದೇಶ ನನ್ನದು ಎಂದು ತಿಳಿದಾಗ ದೇಶಸೇವೆ ಎಂಬ ಮಾತಿನಲ್ಲೂ ಯಾವುದೇ ಅರ್ಥವಿಲ್ಲ ಎಂದೂ ತಿಳಿದಿದೆ.

ಇಂಥದೇ ಯೋಚನೆಗಳನ್ನೆಲ್ಲಾ ಗಂಟು ಕಟ್ಟಿಕೊಂಡು ಮರಳುತ್ತಿರುವಾಗ ಊಟಕ್ಕೆಂದು ರೆಸ್ಟೋರೆಂಟ್ ಒಂದರ ಬಳಿ ಗಾಡಿ ನಿಲ್ಲಿಸಲಾಯಿತು. ಇಷ್ಟೊತ್ತೂ ಕಾಣದಿದ್ದ ಹಸಿವು ಈಗ ಶುರುವಾಗಿದ್ದ ನೋಡಿ ಹಸಿವೂ ಕೂಡಾ ಮನಸ್ಸಿನ ಭಾವವೇ ? ಎಂದೆನಿಸಿದ್ದು ಸುಳ್ಳಲ್ಲ.

ಅದಕ್ಕೆರಡು ರೋಟಿ ತಿನ್ನಿಸಿ ಬರುತ್ತೇನೆ, ಅಲ್ಲಿಯವರೆಗೆ ವಿರಾಮ.

Sunday 1 September 2013

ಭಂಡಾರಧಾರ ಪ್ರವಾಸ ಕಥನ.. : ಅಧ್ಯಾಯ ೫



ಛತ್ರಿ ಜಲಪಾತವೂ, ಅಮೃತೇಶ್ವರ ಮಂದಿರವೂ..

      ಹೋಗಬೇಕೆಂದುಕೊಂಡಿದ್ದ Umbrella Falls ಹುಡುಕಿಕೊಂಡು ಹೊರಟೆವು. ದಾರಿಯಲ್ಲಿ ಅವರಿವರಲ್ಲಿ ಕೇಳಿದಾಗ, ಅಲ್ಲಿ ಇಲ್ಲಿ ಎಂದು ದಾರಿ ತೋರಿದರು. ಅದೇ ದಾರಿಯಲ್ಲೇ ಸಾಗಿದೆವಾದರೂ ಜಲಪಾತ ಕಣ್ಣಿಗೆ ಬೀಳಲಿಲ್ಲ. ಕೊನೆಗೆ ಜಲಪಾತದಲ್ಲಿ ನೀರಿಲ್ಲ ಎಂಬೊಂದು ವಿಚಾರ ತಿಳಿಯಿತು. ನೀರಿಲ್ಲದೆ ಇದೆಂಥ ಜಲಪಾತ ಅಂತ ಕೇಳಬೇಡಿ. ಮೈಸೂರುಪಾಕಿನಲ್ಲಿ ಮೈಸೂರೂ ಇರಲ್ಲ, ಪಾಕ್ ಕೂಡ ಇರಲ್ಲ; ಮದ್ದೂರು ವಡೆಯಲ್ಲಿ ಮದ್ದೂರು ಇರಲ್ಲ; ಅಷ್ಟೇ ಯಾಕೆ, ಈರುಳ್ಳಿಯೇ ಇಲ್ಲದ Onion Masala Dosa ಕಲ್ಕತ್ತೆಯಲ್ಲಿ ತಿಂದಿದ್ದೆ. ಆಗ ಮೊದಲಿನ ಎರಡು ಡೈಲಾಗ್ ಹೊಡೆದು ಗೆಳೆಯರು ನನ್ನ ಸಮಾಧಾನಿಸಿದ್ದರು. ಅದೇ ಥರ ಇದೊಂದು ನೀರಿಲ್ಲದ ಜಲಪಾತ ಅಂದುಕೊಳ್ಳಿ. ಮಳೆ ಹೆಚ್ಚಾದ೦ತೆ ಈ ಜಲಪಾತದಲ್ಲಿ ನೀರು ತುಂಬಿಕೊಳ್ಳುವುದಂತೆ. ಅಂತೂ ಬೇಸರದಿಂದಲೇ ಅತ್ತಿತ್ತ ಕಣ್ಣು ಹಾಯಿಸುತ್ತಾ ಕಡೆಯ ಪಕ್ಷ ಅದರ ಕುರುಹಾದರೂ ಕಾಣುವುದೋ ಎಂದು ನೋಡುತ್ತಿದ್ದೆವು. ಒಂದೆಡೆ ಸಣ್ಣಗೆ ಬೀಳುತ್ತಿದ್ದ ನೀರನ್ನು ಕಂಡು ಅದಕ್ಕೆ Umbrella Falls ಎಂದು ಹೆಸರು ಕೊಟ್ಟು, ನೊಂದ ಮನಸ್ಸಿನಿಂದ ಅದರ ಬಗ್ಗೆ "ನೀರು ಮೇಲಿಂದ ಕೆಳಗೆ ಧುಮುಕಲು ಅಣಿಯಾಗಿ ನಿಂತ ಪ್ರದೇಶದಿಂದ ಯಾರದೋ ಒಂದು ಕೊಡೆ (Umbrella)ಕೆಳಗೆ ಬಿತ್ತಂತೆ. ಹಾಗಾಗಿ ಅದರ ಹೆಸರು" ಎಂಬಿತ್ಯಾದಿ ಕಟ್ಟು ಕತೆ ಕಟ್ಟತೊಡಗಿದೆವು.

      ಮುಂದೆ ರತನ್ ವಾಡಿ ಕಡೆಗೆ ಪಯಣ ಮುಂದುವರಿಯಿತು. ಒಳಗೆ ಮತ್ತವೇ ಆಟ ಕೂಟಗಳು ಮುಂದುವರಿದಿತ್ತು. ನಾನಂತೂ ಕಿಟಕಿಯಿಂದ ಹೊರಗೇ ತಲೆ ನೆಟ್ಟು ಕುಳಿತಿದ್ದೆ. ಸಣ್ಣ ಪುಟ್ಟ ಝರಿ ತೊರೆಗಳು ದೂರದಿಂದಲೇ ಕರೆಯುತ್ತಿದ್ದವು. ಅವೆಲ್ಲವುಗಳಿಗೆ ಕೈ ಬೀಸುತ್ತಾ ಮುಂದೆ ಸಾಗಿದೆವು. ಹೀಗೆ ಸಾಗುವಾಗ ದಾರಿ ಬದಿಯಲ್ಲೊಂದು ಜಲಪಾತ ಕಾಣಿಸಿತು. ಅಷ್ಟೇನೂ ಜನ ಜಂಗುಳಿಯೂ ಇಲ್ಲದ್ದು ಮತ್ತೂ ಖುಷಿಕೊಟ್ಟಿತ್ತು. ಈ ಖುಷಿ ಹಿಂದಿನ ನಿರಾಸೆಯನ್ನು ಮೀರಿಸುವಂಥದ್ದು. ಇದರ ಹೆಸರು ನನಗೆ ಸ್ಪಷ್ಟವಾಗಿ ತಿಳಿದಿಲ್ಲ. ಅವರಿವರಿಂದ ಕೇಳಿ ತಿಳಿದ ಮಟ್ಟಿಗೆ ಇದನ್ನ 'ನಾಣೆ ಜಲಪಾತ' ಎನ್ನಬಹುದು. ನೀವು ನೋಡಬೇಕೆಂದಿದ್ದ Umbrella Falls 'ನಾನೇ' ಎನ್ನುವುದು ಅದರರ್ಥವೋ ನಾನರಿಯೆ. ನನಗಂತೂ ಎತ್ತರದಿಂದ ಧುಮುಕುವ ನೀರಿನ ಬುಡಕ್ಕೆ ಹೋಗಿ ನಿಲ್ಲುವ ತವಕ. ಎರಡು ಹೆಜ್ಜೆ ಮುಂದೆ ಸಾಗಿದರೆ ಒಂದು ಹೆಜ್ಜೆ ಹಿಂದೆ ಎಳೆಯುವ ಮನುಷ್ಯನ ಬುದ್ಧಿಯನ್ನ ಪ್ರಕೃತಿಯೂ ಕಲಿತಿದೆ. ಪಾಚಿಕಟ್ಟಿದ ಕಲ್ಲುಗಳೂ ಅದೇ ಮಾಡುತ್ತಿದ್ದವು. ಈ ಮಧ್ಯೆ ನನ್ನನ್ನು ಮರೆತು ಉಳಿದವರಿಗೆ ಎಚ್ಚರ ಹೇಳುತ್ತಾ ನೀರ ಕೆಳಗೆ ಹೋಗಿ ನಿಂತೆ. ಬಳಿಕ ಒಬ್ಬೊಬ್ಬರಾಗಿ ಬಂದು ಕೂಡಿಕೊಂಡರು. ಆದರೂ ಲೆಕ್ಕದಲ್ಲೊಂದು ಕಡಿಮೆ. ಆಕೆ ಮೊದಲ ಹೆಜ್ಜೆಯಲ್ಲೇ ಜಾರಿದ್ದರಿಂದ, ಜಾರಿ ಬಿದ್ದಿದ್ದರಿಂದ ಮುಂದಿನ ನಮ್ಮೆಲ್ಲರ ಸಾಹಸಗಳಿಗೆ ಸಾಕ್ಷಿಯಾಗಲು ಛಾಯಾಗ್ರಹಣದ ಉಸ್ತುವಾರಿ ವಹಿಸಬೇಕಾಯ್ತು. ಜಲದೇವಿ ಏನು ಸಾಮನ್ಯಳೇ, ನಮ್ಮ ಇರುವಿಕೆಯೇ ಕಾಣದಷ್ಟು ಗಾಢವಾಗಿ ನಮ್ಮ ಮೈಮೇಲೆ ಬರತೊಡಗಿದಳು. ವಿಚಿತ್ರ ನೋಡಿ, ಮಳೆಯ ರೂಪದಲ್ಲಿರುವಾಗ ನೀರು ಗಂಡು (ವರುಣ), ನದಿಯಲ್ಲಿ ಸೇರಿದಾಗ ಹೆಣ್ಣು (ಗಂಗೆ, ಯಮುನೆ ಇತ್ಯಾದಿ), ಕಡೆಗೆ ಸಾಗರವನ್ನು ಸೇರಿದಾಗ ಗಂಡು (ಸಮುದ್ರ ರಾಜ). ನೀರಿಲ್ಲದೇ ಹೋದರೆ ಗಂಡು ಹೆಣ್ಣೆಂಬ ಪ್ರಶ್ನೆ ಎತ್ತಲು ಈ ಒಂದಕ್ಕೂ ಅಸ್ತಿತ್ವವೇ ಇಲ್ಲ. (ಸುತ್ತಲಿನ ರೂಢಿಯಿಂದ ಕಳೆದ ಸಂಚಿಕೆಗಳಲ್ಲಿ ಮಳೆಗೆ ವರುಣ ಎಂದೂ, ಈಗ ಜಲದೇವಿ ಎಂದೂ ನಾನು ಬರೆದಿದ್ದು ನನಗೇ ನಗು ತಂದು ನಿಮ್ಮೊಂದಿಗೆ ಹಂಚಿಕೊಂಡ ವಿಚಾರ ಇದು.)

      ಸೂಜಿಯಂತೆ ಚುಚ್ಚುವ ನೀರು ಮೇಲಿಂದ ಬೀಳುತ್ತಿರುವಾಗ ಗಂಗಾವತರಣದ ಕತೆ ನೆನಪಾಯ್ತು. ಆ ಶಿವನಂತೆ ನಾನೂ ಈ ನೀರನ್ನು ತಡೆಯುವೆನೆನ್ನುವಂತೆ ಹುಚ್ಚಿನಿಂದ ಅದರ ಕೆಳಗೆ ನಿಂತೆ. ತಲೆಯ ಮೇಲೆ ಧಪಧಪನೆ ನೀರು ಬೀಳುತ್ತಿದ್ದುದು ಹಿತವೆನಿಸುತ್ತಿತ್ತು. ಶಿವನಷ್ಟು ಉದ್ದದ ಕೂದಲು ನನ್ನದಿರಲಿಲ್ಲ. ಹಾಗಾಗಿ ಧುಮುಕುತ್ತಿದ್ದ ನೀರನ್ನು ತಲೆ ಮೇಲೆ ಗಂಟು ಕಟ್ಟಿಕೊಳ್ಳಲಾಗಲಿಲ್ಲ. ಜೊತೆಗೆ ತಲೆಗೆ ಎಣ್ಣೆ ಹಚ್ಚಿಕೊಂಡು ಹೋಗಿದ್ದೂ, ಅದಕ್ಕೆ ಜಾರಿ ತಪ್ಪಿಸಿಕೊಳ್ಳಲು ಸುಲಭವಾಯ್ತು. ಅಂತೂ ಇಂಥ ಹುಚ್ಚಿನಲ್ಲಿ ಒಂದಿಷ್ಟು ಹೊತ್ತು ಕಳೆದ ಬಳಿಕ, ಬಳಿಯಲ್ಲಿದ್ದ ಅಂಗಡಿಯೊಂದರಲ್ಲಿ ಚಹಾ, ಈರುಳ್ಳಿ ಪಕೋಡಾ ಹಾಗೂ ಆಲೂಗಡ್ಡೆ ಬೋಂಡ ತಿಂದು ಒಂದು ಹಂತದ ಚಳಿ ಬಿಡಿಸಿಕೊಂಡಾದ ಮೇಲೆ ಮಹಿಳಾ ಮಣಿಗಳನ್ನೆಲ್ಲಾ ಹಾಗೆಯೇ ನಡುಗಬಿಟ್ಟು, ನಾವೆಲ್ಲಾ ಒಣವಸ್ತ್ರಧಾರಿಗಳಾದ ನಂತರ ಅಮೃತೇಶ್ವರ ಮಂದಿರದೆಡೆಗೆ ಹೊರಟೆವು.

      ಮುಂದೆ ಕೂಡ ದೂರದಲ್ಲಿ ಹೀಗೆಯೇ ಧುಮುಕುತ್ತಿದ್ದ ಜಲಪಾತಗಳೋ, ಝರಿಗಳೋ ಕಾಣುತ್ತಿದ್ದವು. ಎಡದಿಂದೊಂದು, ಬಲದಿಂದೊಂದು ಧಾರೆ ಹರಿದುಬಂದು ಮಧ್ಯದಲ್ಲಿ ನಂಟು ಬೆಳೆದು, ಗಂಟು ಬೆಸೆದು, ಮತ್ತೆ ಬಲದ ಧಾರೆ ಸ್ವಲ್ಪ ಎಡಕ್ಕೂ, ಎಡದ ಧಾರೆ ಸ್ವಲ್ಪ ಬಲಕ್ಕೂ ಸರಿದು ಹರಿಯುತ್ತಿದ್ದ  ಝರಿಯೊಂದನ್ನು ನೆಕ್ಲೆಸ್ ಫಾಲ್ಸ್ ಅಂತ ಸಹೋದ್ಯೋಗಿಯೊಬ್ಬರು ಪರಿಚಯ ಮಾಡಿಕೊಟ್ಟರು. ಅವನ್ನೆಲ್ಲಾ ಕಣ್ಣುಗಳಲ್ಲಿ ತುಂಬಿಕೊಳ್ಳುತ್ತಾ ಮುಂದೆ ಸಾಗಿದೆವು.

      ಜನಪ್ರಿಯ ದೇವರುಗಳೆಲ್ಲಾ ವಾಹನಾದಿ ಸೌಕರ್ಯಗಳು ಚೆನ್ನಾಗಿರುವಲ್ಲೇ ವಾಸವಾಗಿರುತ್ತಾರೋ, ಅಥವಾ ಆ ದೇವರ ಜನಪ್ರಿಯತೆ ತಮಗೂ ಬರಲೆಂದು, ಪ್ರಿಯವಲ್ಲದಿದ್ದರೂ ಒಂದಿಷ್ಟು ಜನ ತಮ್ಮನ್ನು ಗುರುತಿಸುವಂತಾಗಲೆಂದು ಜನರೇ ಎಲ್ಲಾ ಸೌಕರ್ಯಗಳನ್ನು ಪ್ರಾರಂಭಿಸುವರೋ ತಿಳಿಯದು. ಆದರೆ ರತನ್ ವಾಡಿ ಎಂಬ ಈ ಕೊಂಪೆಯಲ್ಲಿ ಕುಳಿತಿರೋ ಅಮೃತೇಶ್ವರ ಮಾತ್ರ ಇಂದಿನವರೆಗೆ ತುಂಬಾ ಸುಖಿ. ಹೆಚ್ಚೆಂದರೆ ಅಲ್ಲೊಂದು, ಇಲ್ಲೊಂದು ಕಾಣುತ್ತಿದ್ದ ಮನೆಗಳವರ ಸುಖ ಕಾಯ್ದರಾಯ್ತು. ದೂರದೂರಿಂದ ಬಂದು ಅರ್ಜಿ ಸಲ್ಲಿಸುವವರು ಯಾರೂ ಇಲ್ಲ. ಸಮೀಪದಲ್ಲೇ ಇರುವ ರತನ್ ಗಢ ಕೋಟೆ ನೋಡಲು ಬರುವವರು ಒಂದು ಬಾರಿ ಇವನನ್ನು ಭೇಟಿ ಮಾಡಿ ಹೋಗುವುದುಂಟು. ಹಾಗಾಗಿ ಊರಲ್ಲೇ ಬೆಳೆದ ಒಂದಿಷ್ಟು ಹೂಗಳನ್ನಾಯ್ದು, ಮಾಲೆ ಕಟ್ಟಿ ಎಲ್ಲವನ್ನೂ ತಾವೇ ಶಿವನ ಕೊರಳಿಗೊಡ್ಡಿದರೆ ಆ ಪುಣ್ಯದ ಭಾರ ತಮ್ಮಿಂದ ಹೊರಲಾಗದು ಎಂದು ತೋರಿದವರು ತಮ್ಮ ಪುಣ್ಯವನ್ನು ಒಂದಿಷ್ಟು ಮಾರಾಟಕ್ಕಿಟ್ಟುಕೊಂಡು ಕುಳಿತಿದ್ದರು. ಕಡೆಗೂ ಹೊಟ್ಟೆ ರೊಟ್ಟಿಯಿಂದ ತುಂಬೀತೆ ಹೊರತು ಪುಣ್ಯದಿಂದಲ್ಲವಷ್ಟೇ. ಆದರೆ ನಾವಾರೂ ಖರೀದಿಗೆ ಮನ ಮಾಡದೆ, ಸುಮ್ಮನೆ ಗುಡಿಗೆ ಒಂದು ಸುತ್ತು ಬಂದೆವು. ಶಿಥಿಲಗೊಳ್ಳುತ್ತಿರುವ ಕಲ್ಲಿನ ಕೆತ್ತನೆ, ಇನ್ನೊಂದಿಷ್ಟು ಕಾಲ ಸರಿದರೆ ಅದೂ ಉಳಿಯದೇನೋ. ಮಳೆಗಾಲವಾದ್ದರಿಂದ ಶಿವಲಿಂಗ ನೀರಲ್ಲಿ ಮುಳುಗಿತ್ತು. ಹೊತ್ತು ಮೀರಿದ್ದರಿಂದ ನಾವು ಕೋಟೆಗೆ ಲಗ್ಗೆಯಿಡಲು ಸಾಧ್ಯವಾಗಲಿಲ್ಲ. ನೋಡಲು ಯೋಗ್ಯವಾದ ಎಲ್ಲಾ ಸ್ಥಳಗಳಿಗೆ ಹೋಗುವುದಕ್ಕಿಂತಲೂ, ತಡ ರಾತ್ರಿಯೊಳಗೆ ಮರಳುವುದೇ ನಮ್ಮ ಉದ್ದೇಶವೂ ಆಗಿತ್ತು.



ಅಮೃತೇಶ್ವರ ಮಂದಿರ - ಸಾಂದರ್ಭಿಕ ಚಿತ್ರ : ಗೂ'ಗಲ್ಲಿ'ನಿಂದಾಯ್ದಿದ್ದು
       ಇಲ್ಲಿಂದ ನಮ್ಮದು ಮರು ಪ್ರಯಾಣ. ಬರುತ್ತಾ ಕಂಡಿದ್ದ ಬೆಟ್ಟಗುಡ್ಡಗಳ ಇನ್ನೊಂದು ಸೆರಗನ್ನು ನೋಡುತ್ತಾ, ಅವುಗಳಿಗೆಲ್ಲಾ ವಿದಾಯ ಹೇಳುತ್ತಾ ಕುಳಿತೆ. ಉಳಿದವರೆಲ್ಲಾ Truth and Dare ಆಡುತ್ತಾ ಕುಳಿತಿದ್ದರು. ಆದರೆ ಆಟದಲ್ಲಿ ಆಸಕ್ತಿಯಿದ್ದ ಸತ್ಯ (Truth), ಒಂದು ಕಾರ್ಯ ಕೈಗೊಳ್ಳಲು ತೋರುತ್ತಿದ್ದ ಧೈರ್ಯ (Dare) ಬೇಡ ಎಂದರೂ ಕೇಳುತ್ತಿತ್ತು, ಕಾಣುತ್ತಿತ್ತು. ಈ ಕುರಿತು ಮುಂದಿನ ಸಂಚಿಕೆಯಲ್ಲಿ ತಿಳಿಸುವೆ.

Friday 16 August 2013

ಭಂಡಾರಧಾರ ಪ್ರವಾಸ ಕಥನ.. : ಅಧ್ಯಾಯ ೩

ಕಸಾರಾ ಘಾಟಲ್ಲೊಂದಿಷ್ಟು ಹೊತ್ತು..


      ಬೆಳಗ್ಗಿನ ಉಪಾಹಾರ ಮುಗಿಸಿದ್ದಾಯ್ತು. ಅಂದಿನ ಮುಖ್ಯಾಹಾರವೂ ಅದೇ ಆಗಿದ್ದೀತೆಂಬ ಯೋಚನೆಯೇ ಆಗ ಬಂದಿರಲಿಲ್ಲ. ಪಯಣ ಮುಂದುವರಿಯಿತು. ಮುಂದಿನ ಯಾವುದೇ ಆಟೋಟಗಳಲ್ಲಿ ನಾನು ಪಾಲ್ಗೊಳ್ಳಲಿಲ್ಲ. ಇದು ಬರೀ ಆಟ + ಓಟಕ್ಕೆ ಸೀಮಿತವಾಗಿದ್ದಲ್ಲ, ಬದಲಾಗಿ ಆಟ + ಊಟಕ್ಕೂ. ಬಾಕಿ ದೇಹವೆಲ್ಲಾ ಗಾಡಿಯೊಳಗೇ ಇದ್ದರೂ ಮನಸ್ಸು ಹಾಗೂ ತಲೆಗಳೆರಡನ್ನೂ ಹೊರಗಿನ ಹಸಿರನ್ನು ಮೇಯಲು ಬಿಟ್ಟಿದ್ದೆ. ಕಣ್ಣುಗಳಿಗೋ ದೂರದಲ್ಲಿ ಕಾಣುತ್ತಿದ್ದ ಹಸಿರು ತುಂಬಿದ ಬೆಟ್ಟಗಳನ್ನು ನೋಡಿ ತ(ದ)ಣಿಯುವುದಷ್ಟೇ ಕೆಲಸ. ಒಳಗೆ ಮತ್ತೂ ಅಂತ್ಯಾಕ್ಷರಿಯೋ, ಮೂಕಾಭಿನಯವೋ, ಎರಡೋ, ಎರಡರಲ್ಲೊಂದೋ ಮುಂದುವರಿದಿತ್ತಾದರೂ ಯಾವುದೆಂದು ಅರಿವಿರಲಿಲ್ಲ. ಮಧ್ಯದಲ್ಲೊಮ್ಮೆ ಆಟದಲ್ಲೊಂದಾಗಲು ಆಹ್ವಾನ ಬಂದಿತ್ತಾದರೂ ತಿರುಗಿಯೂ ನೋಡದೆ ತಿರಸ್ಕರಿಸಿದ್ದೆ.
 
      ಸುಮಾರು ೮ ತಿಂಗಳುಗಳು ಕಳೆದು ವರುಣನ ಆಗಮನವಾಗಿರುವುದರಿಂದ ಖುಷಿಗೊಂಡ ಸಹ್ಯಾದ್ರಿ ತನ್ನ ಹುಸಿಮುನಿಸು, ಬೇಸರಗಳೆಲ್ಲವನ್ನೂ ಮರೆತು ಸೃಷ್ಟಿಯ ಸಕಲ ಚೆಲುವೂ ತನ್ನಲ್ಲೇ ಇದೆ ಎನ್ನುವಂತೆ ಮೈತುಂಬಿ ನಿಂತಿರುವುದು ನೋಡುತ್ತಿದ್ದರೆ ಕಣ್ಣುಗಳು ಕದಲುತ್ತಿರಲಿಲ್ಲ. ಮುಂದೆ ಮುಂದೆ ಸಾಗುವಾಗ ಒಂದಕ್ಕಿಂತ ಒಂದು ಎತ್ತರದ ಬೆಟ್ಟಗಳನ್ನು ಕಂಡಾಗ  ಅತಳ, ವಿತಳ, ಸುತಳ, ತಳಾತಳ, ಮಹಾತಳ, ರಸಾತಳ, ಪಾತಾಳಗಳನ್ನು ಪಾದದಡಿಯಲ್ಲಿ ತುಳಿದಿಟ್ಟ ದಿಟ್ಟ ಪರಾಕ್ರಮವಲ್ಲವಾದರೂ, ಒಂದರೆ ಕ್ಷಣ ಆ ಬೆಟ್ಟಗಳ ಮೇಲೆ ಹತ್ತಿ ನಿಲ್ಲುವ ಮನಸ್ಸಾಗುತ್ತಿತ್ತು. ಆದರೆ ಸಾಗುತ್ತಿದ್ದುದು ಮುಖ್ಯರಸ್ತೆಯಲ್ಲಾದುದರಿಂದ ಕಂಡ ಕಂಡಲ್ಲಿ ವಾಹನ ನಿಲ್ಲಿಸಲು ಅವಕಾಶವಿರಲಿಲ್ಲವಾದ್ದರಿಂದ ಒತ್ತಿ ಬರುತ್ತಿದ್ದ ಆಸೆಯನ್ನು ಹತ್ತಿಕ್ಕಿ ಕೂರಬೇಕಾಯ್ತು. ಕಣ್ಣೆವೆ ಮುಚ್ಚದೆ, ನಿಸರ್ಗದ ಸೊಬಗನ್ನೆಲ್ಲ ಇಂದೇ ಸೆರೆಹಿಡಿದುಬಿಡುವೆನೆನ್ನುವಂತೆ ಕುಳಿತ ನನ್ನನ್ನು ನೋಡಿ ವರುಣನಿಗೂ ಸಿಟ್ಟು ಬಂತೇನೋ.! ಅಥವಾ ಹೊಟ್ಟೆಕಿಚ್ಚೋ..!! ನುಗ್ಗಿ ಬಂದು ಕಣ್ಣುಗಳಿಗೆ ಸೂಜಿಯಂತೆ ಚುಚ್ಚತೊಡಗಿದ. ಅವನಿಗೆ ಬೆಂಬಲ ಕೊಡಲು ಮರುತ್ತ ಬೇರೆ. ಆದರೂ ನನ್ನ ಹಟ ಬಿಡದೆ ಹಾಗೆಯೇ ಕುಳಿತೆ. ನಾನೇ ಪೂರ್ಣ ಹಿಂದಿನ ಸೀಟಿನಲ್ಲಿ ಕೂತಿದ್ದುದರಿಂದ ಅಲ್ಪ ಸ್ವಲ್ಪ ನೀರು ಒಳ ಹೊಕ್ಕರೂ ಇತರರಿಗೆ ತೊಂದರೆಯಾಗುವ ಪ್ರಶ್ನೆಯಿರಲಿಲ್ಲ. ಅಲ್ಲದೆ ಉಳಿದವರೆಲ್ಲಾ ಅವರವರ ಆಟದಲ್ಲೋ, ನೋಟದಲ್ಲೋ ಮಗ್ನರಾಗಿದ್ದುದರಿಂದ ಆ ಬಗ್ಗೆ ಯಾವುದೇ ಯೋಚನೆ ನನಗೆ ಬಂದೂ ಇರದೆ ತಲೆ ಒಳ ಹಾಕದೆ ಕುಳಿತೇ ಇದ್ದೆ. ನನ್ನ ಹಟದ ಮುಂದೆ ಸೋತೋ, ಕನಿಕರ ಬಂದೋ ವರುಣ ಸುಮ್ಮನಾದ. ಈಗ ನಿಮ್ಮ ಮುಂದೆ 'ಅದು ನನ್ನದೇ ಗೆಲುವು, ಅಂದು ಅವನು ಸೋತಿದ್ದೇ ಸತ್ಯ' ಎಂದು ನಾನಿಲ್ಲಿ ಕೊಚ್ಚಿಕೊಂಡರೂ ಅವನಿಗೇನೂ ತಿಳಿಯದು ಬಿಡಿ. ಹೀಗೆ ಮತ್ತೊಮ್ಮೆ ನೋಡಲು ಸಿಗದ ದೃಶ್ಯಗಳನ್ನೆಲ್ಲಾ ಒಂದೇ ನೋಟಕ್ಕೆ ಕಣ್ಮನಗಳಲ್ಲಿ ತುಂಬಿಕೊಳ್ಳುತ್ತಾ ಮುಂದೆ ಸಾಗಿದೆ. ಈ ಮಧ್ಯೆ ಮಧು ಒಮ್ಮೆ ಬಂದು ನನ್ನ ತಲೆ ತೊಯ್ದಿರುವುದರ ನೆನಪು ಮಾಡಿಕೊಟ್ಟು ಹೋದಳು. ಅದೇನೂ ನನಗೆ ತಿಳಿಯದ ವಿಷಯವೇ.? ನಕ್ಕು ಸುಮ್ಮನಾದೆ.

  
       ಒಂದಿಷ್ಟು ಮುಂದೆ ಸಾಗಿದ ಬಳಿಕ ಕಸಾರ್ ಎಂಬಲ್ಲಿ ಗಾಡಿ ನಿಲ್ಲಿಸಲು ಸ್ವಲ್ಪ ಅವಕಾಶವಿತ್ತು. ಮೂರು ಮಾರು ದೂರದಲ್ಲಿರುವುದೇ ಸ್ಪಷ್ಟವಾಗಿ ಕಾಣದಷ್ಟು ಮಂಜು ಮುಸುಕಿದ ಪ್ರದೇಶವದು. ಜೊತೆಗೆ ನೆಲದ ತುಂಬಾ ತುಂಬಿದ ಹಸಿರು ಹುಲ್ಲು, ನೆಲಕ್ಕೆ ರತ್ನಗಂಬಳಿ ಹಾಸಿದಂತಿತ್ತು. ದಿನಾ ಅದೇ ಕಟ್ಟಡಗಳ ಮಧ್ಯೆ ಇದ್ದು ಬೇ'ಸತ್ತ' ಮನಸ್ಸಿಗೊಂದಿಷ್ಟು ಚೈತನ್ಯ ಬಂದಂತಾಯಿತು. ಕಾಡು, ಗುಡ್ಡ , ಹಸಿರುಗಳನ್ನೆಲ್ಲಾ ಕಾಣದ ಮನುಷ್ಯ ನಾನಲ್ಲ. ಮೊತ್ತ ಮೊದಲ ಬಾರಿಗೆ ಇದನ್ನು ಕಂಡು 'ಅದ್ಭುತ' ಎಂದೆನ್ನುತ್ತಿರುವುದೂ ಅಲ್ಲ. ಬದಲಾಗಿ ಮಣ್ಣು, ನೀರುಗಳೊಂದಿಗೆ ಆಡುವುದು ಚಿಕ್ಕಂದಿನಿಂದ ಬಂದ ಒಂದು ತೆರದ ಹುಚ್ಚು. ತೋಟದಲ್ಲಿ ಹರಿಯುವ ತೋಡಿನ ನೀರಿನಲ್ಲಿ, ಅಂತೆಯೇ ಸಣ್ಣ ಪುಟ್ಟ ಪ್ರವಾಸದ ಸಂದರ್ಭಗಳಲ್ಲಿ ಸಮುದ್ರದ ಕಿನಾರೆಯಲ್ಲಿ ಚಿಕ್ಕಂದಿನಿಂದಲೂ ಆಡಿದ ನೆನಪಿದೆ. ಮಳೆಯಲ್ಲಿ ನೆನೆಯುತ್ತಾ Football ಆಡಿ ಶಿಕ್ಷೆ ಪಡೆದಿದ್ದೂ ನೆನಪಿದೆ. ಆದರೆ ಓದು ಸಾಗಿದಂತೆ ಭವಿಷ್ಯದ ಚಿಂತೆ ಕಟ್ಟಿ, ಮಗ ತಮ್ಮಂತೆ ಕಷ್ಟಪಡಬಾರದೆಂಬ ತಂದೆ-ತಾಯಿಯರ ಮುದ್ದಿನಿಂದಾಗಿ ತೋಟದ ಮಣ್ಣು ತುಳಿಯದೆ ಬೆಳೆದು, Engineering ಅಥವಾ Medical ಎಂಬುದೊಂದು ತಲೆಯಲ್ಲಿ ತುಂಬಿ ನಿಂತು, Biology ಕಷ್ಟ ಎಂದು ಡಾಕ್ಟರಾಗುವ ಆಸೆ ಬಿಟ್ಟು, ಇಂಜಿನಿಯರಿಂಗ್ ಓದಿ, ಇಂದೊಂದು ಕೆಲಸ ಹಿಡಿದಿದ್ದಾಗಿದೆ. ಇಷ್ಟು ದಿನದ ಬದುಕಲ್ಲಿ ಕಾಣದ, ಮುಂದೆಯೂ ಕಂಡೇನೆಂಬ ನಂಬಿಕೆ ಇಲ್ಲದಿರುವ ಒಂದು ವಿಚಾರ ಎಂದರೆ 'ಒಬ್ಬ ಒಳ್ಳೆ ರೈತನಾಗು' ಅಂತ ಯಾರಾದರೂ, ಯಾರನ್ನಾದರೂ ಹರಸಿಯಾರೆನ್ನುವುದು. ಈಗಂತೂ ಎಲ್ಲ ಕೆಟ್ಟು ಅಂತಲ್ಲವಾದರೂ ಪಟ್ಟಣ ಸೇರುವ ಆಸೆಯಿರುವವರೇ. ಅದಕ್ಕೇ ಜಾಗ ಸಾಲದಾಗಿ ಹಳ್ಳಿಗಳೆಲ್ಲಾ ದಿಲ್ಲಿಗಳಾಗಹೊರಟಿವೆ. ಇರಲಿ, ಯಾರಿಗೋ ಉಪದೇಶ ಮಾಡಿ ಒಂದಿಷ್ಟು ಜನರ ಶಭಾಷಗಿರಿ, ಮತ್ತೊಂದಿಷ್ಟು ಜನರ ನಿಷ್ಠುರ ನನಗ್ಯಾಕೆ ? ಹೇಳಬೇಕಾಗಿದ್ದ ವಿಷಯ ಏನಪ್ಪಾ ಅಂತಂದ್ರೆ, ಇತ್ತೀಚಿಗೆ ಹೆಚ್ಚಿರುವ ಓದಿನ ಹುಚ್ಚಿನಿಂದಾಗಿಯೋ, ಮೊದಲಿನಿಂದಲೂ ಇದ್ದಿದ್ದೆಯೋ; ಹೊರಗಿನ ಚೆಲುವು ಆಸ್ವಾದಿಸುವ ಮನಸ್ಸಂತೂ ಬೆಳೆದಿದೆ.

      ಹೀಗೆ ಕಸಾರಾ ಘಾಟಿನ ಸೊಬಗ ಸವಿಯುತ್ತಾ ಕುಳಿತಾಗ, ಹಿಂದೆಯೂ ತುಂಬಾ ಸಾರಿ ಮನದಲ್ಲಿ ಮಿಂಚಿ ಮರೆಯಾದೊಂದು ಪ್ರಶ್ನೆ ಮತ್ತೊಮ್ಮೆ ಸುಳಿಯಿತು.
ಸೌಂದರ್ಯ ಇರುವುದು ಪ್ರಕೃತಿಯಲ್ಲೋ ?
ಅದನ್ನು ನೋಡುವ ನೋಟದಲ್ಲೋ ?
ಅನುಭವಿಸುವ ಮನಸ್ಸಿನಲ್ಲೋ ?
ವ್ಯಕ್ತಪಡಿಸುವ ಮಾತುಗಳಲ್ಲೋ ?
ಒಂದಿಬ್ಬರಲ್ಲಿ ಕೇಳಿದೆ, ನಗೆಯಾಡಿದರು. 'ಇದೇನು ಮರುಳು ಇವನಿಗೆ ಎಂದೋ, ಏನೋ..!?' ಅಂತೂ ಪ್ರಶ್ನೆ ಉದ್ಭವಿಸಿದ್ದೆಲ್ಲೋ ಅಲ್ಲೇ ಉಳಿಯಿತು.
  
      ಪಾಳುಬಿದ್ದೊಂದು ರೈಲು ಪಟ್ಟಿಯ ಬಳಿ ಒಂಟಿ ಕಂಬಿಯ ಮೇಲೆ ನಡೆಯುವ ಸರ್ಕಸ್ಸು ನಡೆಸುವವರಂತೆ, ಸುತ್ತಲ ಹಸಿರಲ್ಲಿ ಹರಡಿ ನಿಂತು ಅಷ್ಟೂ ಹಸಿರಲ್ಲಿ ನಮ್ಮದೇ ಉಸಿರೆನ್ನುವಂತೆ, ಮುಂದೊಮ್ಮೆ ಈ ಎಲ್ಲಾ ನೆನಪುಗಳನ್ನು ಮತ್ತೊಮ್ಮೆ ಹಸಿಯಾಗಿಸಲೆಂಬಂತೆ ಸ್ವಲ್ಪ ಹೊತ್ತು ಫೋಟೋ ಕ್ಲಿಕ್ಕಿಸಿಕೊಂಡು ಪಯಣ ಮುಂದುವರೆಯಿತು. ಮುಂದೆಯೂ ಇಂಥದೇ ನೋಟ. ಹಸಿರು ತುಂಬಿದ ಕಾಡು, ನಾನಿರುವ ಎತ್ತರಕ್ಕೆ ನೀನೇರಬಲ್ಲೆಯಾ ಎನ್ನುವ ಬೆಟ್ಟಗಳು, ಇಗೋ ಬಂದೆ ಎಂದೆಂದು ಮೇಲೇರಿ ಸಾಗುತ್ತಿರುವ ಮೋಡಗಳು, ಇದನ್ನೆಲ್ಲಾ ನನ್ನ ಮುಂದಿನ ಸೀಟಿನಲ್ಲಿ ಕಿಟಕಿ ಪಕ್ಕ ಕುಳಿತು ಕೆಮರಾ ಒಂದರಲ್ಲಿ ಸೆರೆ ಹಿಡಿಯುವ ಪ್ರಯತ್ನ ಮಾಡುತ್ತಿದ್ದರು. 'ನಾನು ಕಣ್ಣಲ್ಲಿ ನೋಡಿ ಮನಸ್ಸಲ್ಲಿ ತುಂಬಿಕೊಂಡಷ್ಟು, ಇವರು ಪುಟಗೋಸಿ ಕೆಮರಾದ ಕಣ್ಣಲ್ಲಿ ನೋಡಿ Memory Cardನಲ್ಲಿ ತುಂಬಿಕೊಬಹುದೇ ?' ಅಂತನ್ನಿಸಿದರೂ ಯಾರಲ್ಲೂ ಕೇಳಹೋಗಿಲ್ಲ. ಒಂದೇ ವಿಷಯಕ್ಕೆ ಮತ್ತೆ ಮತ್ತೆ ಸಮರ್ಥನೆ ಕೊಡೋದು ಬೇಕಿಲ್ಲ, ಆಲ್ವಾ..?

Friday 9 August 2013

ಭಂಡಾರಧಾರ ಪ್ರವಾಸ ಕಥನ.. : ಅಧ್ಯಾಯ ೨

ಮಹಾನಗರಿಯಿಂದ ಹೊರಬಿದ್ದಿದ್ದು..


   ಅಲ್ಲೇ ಬೆಳಗುತ್ತಿದ್ದ ಬೀದಿದೀಪವೊಂದರ ಕೆಳಗೆ ಕುಳಿತು ಕಾರಂತಜ್ಜನ ಆತ್ಮಕಥೆ 'ಹುಚ್ಚು ಮನಸ್ಸಿನ ಹತ್ತು ಮುಖಗಳು' ಅನ್ನು ಓದುತ್ತಿದ್ದೆ. ಸ್ವಲ್ಪ ಹೊತ್ತಲ್ಲಿ ನನ್ನ ಫೋನು ಸಂಗೀತ ಹಾಡತೊಡಗಿತು. ನಮ್ಮ ಗಾಡಿ ಪವನ್ ಹಾಗೂ ಅಭಿಷೇಕ್ ರನ್ನು ಹೊತ್ತು ಮುಂದೆ ಹೊರಟಿರುವುದಾಗಿ ತಿಳಿದು ಬಂತು. ಅದು ಜೆ.ಬಿ.ನಗರ ತಲುಪಿದಾಗ ಸಮಯ ೫.೩೦ ಸರಿದಿತ್ತು. ಇಷ್ಟರಲ್ಲಿ ಹುಡುಗಿಯರ ಗುಂಪೂ ಬಂದು ಕಲೆತು ಮುಂದಿನ ಹತ್ತು ನಿಮಿಷದಲ್ಲಿ ಇಲ್ಲಿಂದ ಹೊರಟಿದ್ದಾಯ್ತು. ಆದಿತ್ಯನನ್ನುಳಿದು ಬಾಕಿ ಎಲ್ಲರೂ ಗಾಡಿಯಲ್ಲಿ ಜಮಾ ಆದೆವು. ನಾನೊಂದು ಕಿಟಕಿ ಬದಿಯ ಆಸನವನ್ನು ಹಿಡಿದು ಕುಳಿತೆ. ಉಳಿದೆಲ್ಲರ ಕೃಪೆಯಿಂದ ತಿರುಗಿ ಬರುವವರೆಗೂ ಆ ಆಸನ ನನ್ನದಾಗಿಯೇ ಉಳಿಯಿತು. ಮುಂದೆ ಬೋರಿವಲಿಯಲ್ಲಿ ಆದಿತ್ಯನನ್ನೂ ಹತ್ತಿಸಿಕೊಂಡು ನಮ್ಮ ಗಾಡಿ ಮುಂದೆ ಸಾಗಿತು. ನಾನು ಕಿಟಕಿಯಿಂದಾಚೆ ಇಣುಕುತ್ತಾ ಹಿಂದೆ ಹೋಗುತ್ತಿದ್ದ ಕಟ್ಟಡಗಳನ್ನ ಲೆಕ್ಕ ಹಾಕುತ್ತಾ ಕುಳಿತೆ.

   ಬಹುತೇಕ ಎಲ್ಲ ಪ್ರವಾಸಗಳಲ್ಲೂ ಅನುಭವಿಸುವ ಸಾಮಾನ್ಯ ಸನ್ನಿವೇಶವೊಂದು ನಮ್ಮೊಡನೆಯೂ ಜರುಗಿತು. ಗಾಡಿಯಲ್ಲಿ Pendrive ಕನೆಕ್ಟ್ ಮಾಡುವ ವ್ಯವಸ್ಥೆ ಇರಲಿಲ್ಲ. ಡ್ರೈವರನ ಬಳಿಯಿದ್ದ CDಯಲ್ಲಿದ್ದ ಹಾಡುಗಳು ಚೆನ್ನಾಗಿದ್ದರೂ ಆ ಸಮಯದಲ್ಲಿ ಆಸ್ವಾದಿಸುವ ಮನಸ್ಸು ಯಾರಿಗೂ ಇದ್ದಂತಿರಲಿಲ್ಲ. ಹೀಗಾಗಿ ನಮ್ಮ ಗಾಡಿಯಲ್ಲಿ ಒಂದಿಷ್ಟು ಗಾನ ಕೋಗಿಲೆಗಳ ಉಗಮವಾಯಿತು. ನಿಮ್ಮ ನೆನಪಿನಲ್ಲಿರಬೇಕಾದ ಒಂದು ವಿಚಾರ, ಎಲ್ಲಾ ಕೋಗಿಲೆಗಳು ಇಂಪಾಗಿಯೇ ಹಾಡಬೇಕೆಂದಿಲ್ಲ ಎಂಬುದೊಂದಾದರೆ ಕರ್ಕಶವಾಗಿ ಹಾಡುವ ಎಲ್ಲಾ ಹಕ್ಕುಗಳು ಕಾಗೆಗಳಿಗೆ ಮಾತ್ರ ಕಾಯ್ದಿರಿಸಲಾಗಿಲ್ಲ ಎಂಬುದಿನ್ನೊಂದು. ಮುಂದೆ ಒಬ್ಬೊಬ್ಬರು ಒಂದೊಂದು ಹಾಡತೊಡಗಿದರು. ಮಧ್ಯದಲ್ಲಿ ಎಲ್ಲವೂ ಒಟ್ಟಾಗಿ ಇಂದಿನ Re-Mix ಹೂರಣ ತಯಾರಾಗುತ್ತಿತ್ತು. ಹಾಡುವುದು ನಮ್ಮಿಚ್ಛೆ, ಕೇಳುವುದು ಪರರಿಚ್ಛೆ ಎಂಬಂಥ ಧಾಟಿ ಅದು ಎಂದರೂ ಸರಿ. ಎಲ್ಲ ಕೇಳಲಿ ಎಂದು ಅವರೆಲ್ಲಾ ಹಾಡಿದ್ದಲ್ಲ, ಒಂದು ಪ್ರವಾಸ ಹೋಗ್ತಾ ಅದರಲ್ಲೂ ಬಾಡಿಗೆ ಗಾಡಿ ಹಿಡಿದು ಉತ್ಸಾಹಿ ತಂಡ ಜೊತೆಯಲ್ಲಿದ್ದಾಗ ಹಾಡು ಕುಣಿತಗಳು ನಡೆಯಲೇಬೇಕೆಂಬುದು ಹಿಂದಿನಿಂದ ಬಂದ ಸಂಪ್ರದಾಯವೇನೋ ಎಂಬಷ್ಟು ರೂಢಿಯಾಗಿಬಿಟ್ಟಿದೆಯಲ್ಲಾ, ಅದರ ಫಲ ಇದು. ಇಂಥದೊಂದು ಹಾಡುಗಳ ಹೂರಣಕ್ಕೆ ತಡೆ ಹಾಕಲು, ಅಂತ್ಯಾಕ್ಷರಿ ಆಟ ಶುರುವಾಯ್ತು. ಎಲ್ಲರೂ ಬಹುತೇಕ ಹಿಂದಿ ಹಾಡುಗಳನ್ನೇ ಹಾಡುತ್ತಿದ್ದುದರಿಂದ ನಾನು ಬಾಯಿ ಹಾಕಲು ಹೋಗಲಿಲ್ಲ. ಮೊದಲೆರಡು ಸಾಲುಗಳನ್ನು ಬಿಟ್ಟರೆ ಮುಂದೆ ಬರೀ 'ಲ' ಇಲ್ಲವೇ 'ನ' ಅಕ್ಷರದ ಗುಣಿತಾಕ್ಷರಗಳಿಂದಲೇ ಹಾಡು ಪೂರ್ತಿಗೊಳಿಸುವ ನನ್ನ ಕುಶಲತೆ ಇಲ್ಲಿ ಪ್ರದರ್ಶಿಸುವುದು ಬೇಡ ಎಂದು ಸುಮ್ಮನಾಗಿದ್ದೆ. ಕನ್ನಡ ಹಾಡುಗಳಿಗೆ ಅವಕಾಶವಿದ್ದರೂ, ಎಲ್ಲರ ಬತ್ತಳಿಕೆಯಲ್ಲಿದ್ದ ಹಿಂದಿ ಹಾಡುಗಳು ಬರಿದಾದ ಮೇಲೆಯೇ ಅವಕಾಶ ಎಂದು ಗೊತ್ತಿದ್ದರಿಂದ ನಾನು ಸುಮ್ಮನೆ ಕುಳಿತೆ.

   ಒಂದಿಷ್ಟು ಹೊತ್ತು ಹೀಗೆ ಹಾಡಿ ದಣಿದ ಬಾಯಿಗಳಿಗೆ ವಿಶ್ರಾಂತಿ ನೀಡುವುದೆಂದು ನಿರ್ಧರಿಸಿ Dumb Charades ಆಡುವ ಉಮ್ಮೇದು ಎಲ್ಲರಿಗೆ. ಐದೈದು ಜನರ ಎರಡು ತಂಡಗಳನ್ನು ರಚಿಸಿದ್ದಾಯ್ತು. ಒಂದು ತಂಡದವರು ಎರಡನೇ ತಂಡದ ಯಾರಾದರೊಬ್ಬರ ಕಿವಿಯಲ್ಲಿ ಒಂದು ಚಲಚ್ಚಿತ್ರದ ಹೆಸರನ್ನು ಪಿಸುಗುಡುವುದು, ಅವನು/ಳು ಅಭಿನಯಿಸಿದ್ದನ್ನು ಉಳಿದವರು ಅರ್ಥ ಮಾಡಿಕೊಂಡು ಚಿತ್ರದ ಹೆಸರನ್ನು ಹೇಳಬೇಕು. ಇಲ್ಲಿ ಎರಡು ರೀತಿಯ ಸ್ಪರ್ಧೆ. ಒಬ್ಬ ಕಿವುಡನಿಗೆ ನೀವು ಒಂದು ವಿಷಯವನ್ನು ಎಷ್ಟು ಸಮರ್ಥವಾಗಿ ಅರ್ಥಮಾಡಿಸಬಲ್ಲಿರಿ ಎಂಬುದು ಒಂದಾದರೆ, ಎರಡನೆಯದು ಒಬ್ಬ ಮೂಕನ ಭಾಷೆಯನ್ನು ನೀವೆಷ್ಟು ಅರ್ಥ ಮಾಡಿಕೊಳ್ಳಬಲ್ಲಿರಿ ಎಂಬುದು. ನಾನು ಮೊದಲ ಬಾರಿ ಇದನ್ನು ಆಡಿದ್ದು ನನ್ನ ಇಂಜಿನಿಯರಿಂಗ್ ಸಮಯದ ಹಾಸ್ಟೆಲ್ ಜೀವನದಲ್ಲಿ. ಆಗ ಬರೀ ಒಂದು ಆಟವಾಗಿ ಕಂಡಿದ್ದರ ಇನ್ನೊಂದು ಅರ್ಥ ಈಗ ಕಾಣುತ್ತಿದೆ. ಈ ಆಟವಂತೂ ನನಗೆ ಇಷ್ಟವಾಯ್ತು. ಜೊತೆಗೆ ಇಂಜಿನಿಯರಿಂಗ್ ಮುಗಿಯುವವರೆಗೆ ವಿವಿಧ ಪ್ರಹಸನಗಳಲ್ಲೋ, ಮೂಕಾಭಿನಯಗಳಲ್ಲೋ ಅಭಿನಯಿಸಿದ್ದರ ಫಲವಾಗಿ ಮನದಲ್ಲೇನಾದರೂ ಚೂರು ಅಭಿಮಾನ ಉಳಿದಿದ್ದರೆ ಅದಂತೂ ಮಾಯವಾಯ್ತು.

   ನಮ್ಮ ರಥದ ಒಳಗೆ ಇಷ್ಟೆಲ್ಲಾ ನಡೆಯುವಷ್ಟರಲ್ಲಿ, ನಾವು ಮಹಾನಗರಿಯಿಂದ ಹೊರಬಿದ್ದಿದ್ದೆವು. ನಮ್ಮೆಲ್ಲರ ಕಿರುಚಾಟಗಳಿಗೆ ಕಿವುಡಾಗಿ, ಬಾಯಿ ಬಂದರೂ ಮೂಕನಾಗಿದ್ದ ಸಾರಥಿ
'ಯಾರೇ ಕೂಗಾಡಲಿ.. ಯಾರೇ ತೆಪ್ಪಗಿರಲಿ..
ನನ್ನ ನೆಮ್ಮದಿಗೆ ಭಂಗವಿಲ್ಲ..
ನನ್ನ ಗಾಡಿಗೆ ಬೇರೆ ಸಾಟಿಯಿಲ್ಲ..
ಬಿಸಿಲು, ಮಳೆ, ಮಂಜು, ಗಾಳಿಗೆ ಅಳುಕದೆ ಮುಂದೆ ಸಾಗುವೆ..'
ಎಂದು ನಿರ್ಧರಿಸಿದಂತಿತ್ತು. ಹೀಗೆ ಹೊರಟ ಪಯಣ ಗಂಟೆ ೭.೩೦ರ ಸುಮಾರಿಗೆ ಬೆಳಗ್ಗಿನ ಉಪಾಹಾರದ ಸಲುವಾಗಿ ಅಲ್ಪವಿರಾಮ ಪಡೆಯಿತು.

   ಇಷ್ಟು ಹೊತ್ತು ಏನೂ ನುಡಿಯದೆ ಸುಮ್ಮನಿದ್ದ ಹೊಟ್ಟೆ ಈಗ ತನ್ನ ಇರುವನ್ನು ಸಾರತೊಡಗಿತು. ಅದಕ್ಕೆರಡು ಇಡ್ಲಿ, ಒಂದು ಮಸಾಲೆ ದೋಸೆ ತಿನ್ನಿಸಿ ಸಮಾಧಾನ ಪಡಿಸಿದೆ. ಎಲ್ಲರೂ ತಿಂಡಿ ಮುಗಿಸಿ ಬರುವಷ್ಟರಲ್ಲಿ ನಮ್ಮ ಡ್ರೈವರನೂ ತನ್ನ ಉದರ ಪೋಷಣೆ ಮುಗಿಸಿ ನಮಗಾಗಿ ಕಾಯುತ್ತಿದ್ದ. ಎಲ್ಲರೂ ಗಾಡಿ ಏರಿ ಮುನ್ನಡೆದೆವು.

Thursday 18 July 2013

ಬರೆಯುವ ಹಂಬಲ ಯಾಕೆ ..!!??


    ಕತೆಗಳನ್ನೋದುವುದು ಚಿಕ್ಕಂದಿನ ಹುಚ್ಚು. ಪ್ರಾಯ ಹೆಚ್ಚಿದಂತೆ ಈ ಹುಚ್ಚು ಹೆಚ್ಚಾಗಿ ಈಗ ಕಾದಂಬರಿಗಳನ್ನೋದುವ ಮಟ್ಟಕ್ಕೆ ಬೆಳೆದಿದೆ. ಬರೀ ಓದಿದರೆ ಸಾಕೇ, ಕೆಲವೊಂದು ಪಾತ್ರಗಳನ್ನು ನೋಡಿ 'ಇದು ನಾನಾ ?' ಎಂಬ ಪ್ರಶ್ನೆ ಮೂಡಿದ್ದೂ ಇದೆ. ಆಗ ನನ್ನ ಮರುಳು ಮನಸ್ಸು 'ಹೌದು' ಎಂದು ಸಮ್ಮತಿಸಿದರೆ ಇನ್ನೊಮ್ಮೆ ಅದೇ ವ್ಯಕ್ತಿಯ ಒಂದಿಷ್ಟು ಗುಣದೋಷಗಳನ್ನು ನೋಡಿ 'ಇದು ನಾನಲ್ಲ' ಎಂದದ್ದಿದೆ. ಜೊತೆಗೆ 'ಇದು ನಾನಾಗಿದ್ದರೆ ಹೀಗಿರುತ್ತಿದ್ದೆ' ಎಂದು ಹೇಳಿದ್ದೂ ಇದೆ. ಆ 'ಹೀಗಿರುತ್ತಿದ್ದೆ'ಯನ್ನ ಹಂಚಿಕೊಳ್ಳುವುದಕ್ಕೆ ಬರೆಯುವ ಹಂಬಲ ಹುಟ್ಟಿತು.

    ಕಲಾವಿದನೊಬ್ಬನ ಕಲಾಕೃತಿಗೆ ಸುತ್ತಲ ಜಗತ್ತೇ ಸ್ಪೂರ್ತಿ. ಕಾದಂಬರಿಗಳಲ್ಲಂತೂ ಕಲ್ಪನೆಯ ಕತೆಗಿಂತಲೂ, ಪಾತ್ರಗಳ ಶೀಲ ನಿರೂಪಣೆಯೇ ಪ್ರಧಾನ ವಸ್ತು. ಒಂದು ಪಾತ್ರಕ್ಕೆ ಗುಣ ದೋಷಗಳನ್ನು ಹೊರಿಸುವಲ್ಲಿ ಕಾದಂಬರಿಕಾರನ ಸ್ವಂತ ಅನುಭವಗಳೂ, ಅವನು ಕಂಡ ಇತರರ ಬದುಕಿನ ಅನುಭವಗಳೂ ಪ್ರಮುಖ ಪಾತ್ರ ವಹಿಸುತ್ತವೆ. ಒಟ್ಟಾರೆಯಾಗಿ ಹೇಳುವುದಾದರೆ ಒಂದು ಕಾದಂಬರಿ ಯಾವುದೋ ಒಬ್ಬ ವ್ಯಕ್ತಿಯ ಜೀವನ ಚರಿತ್ರೆ ಎಂದರೂ ತಪ್ಪಿಲ್ಲ. ಇದು ನನ್ನ ಸ್ವಂತ ಅಭಿಪ್ರಾಯ. ಇಂಥ ಕಾದಂಬರಿಗಳಲ್ಲಿ ಒಂದು ಪಾತ್ರ ನಾನಾದರೆ ನನ್ನ ಜೊತೆ ಒಡನಾಡಿದ ಪಾತ್ರಗಳನ್ನು ದೃಷ್ಟಿಯಲ್ಲಿಟ್ಟು ಹೊರಜಗತ್ತಲ್ಲಿ ಅಂಥವರನ್ನು ಹುಡುಕುವ ಹುಚ್ಚು ಕನಸನ್ನೂ ಕಂಡಿದ್ದೇನೆ. 'ಅದು ನೀವಾ ?' ಎಂದು ಕೇಳುವುದಕ್ಕೆ ಬರೆಯುವ ಹಂಬಲ ಹುಟ್ಟಿತು.

    ಮುಖ್ಯವಾಗಿ ಇವೆಲ್ಲವನ್ನೂ ಮುಖತಃ ಕೇಳಲು ಮನಸ್ಸಿಲ್ಲದವರಲ್ಲಿ ನಾನು ಹೇಳಿಕೊಳ್ಳುವುದಕ್ಕಿಂತ ಬರೆಯುವ ಪ್ರಯತ್ನ ಮಾಡಿದ್ದೇ ಆದರೆ ಇನ್ನೊಬ್ಬರಿಗೆ ನನ್ನಿಂದಾಗುವ ಕರಕರೆ - ಕಿರಿಕಿರಿಯೂ ತಪ್ಪಿತಷ್ಟೇ. ಅದಕ್ಕಾಗಿ ಬರೆಯುವ ಹಂಬಲ ಹುಟ್ಟಿತು.

    ಇದಿಷ್ಟರ ಜೊತೆಗೆ ಸ್ನೇಹಿತರೊಂದಿಗೆ ಕಳೆದ ಕೆಲ ಕ್ಷಣಗಳನ್ನೂ, ಹಳೆಯ ಕೆಲ ನೆನಪುಗಳನ್ನೂ ಅವು ಮರೆಯುವ ಮೊದಲೊಮ್ಮೆ ಬರೆಯುವ ಹಂಬಲ ಹುಟ್ಟಿತು.



    ಈ ನನ್ನ ಮರುಳು ಮಾತುಗಳಿಗೆ ಯಾವುದೇ ಮೆಚ್ಚುಗೆಯ ಆಶೆಯಿಲ್ಲ, ಹಳಿದರೆ ಹತಾಶೆಯಿಲ್ಲ. ನನಗನ್ನಿಸಿದ್ದು ನಿಮಗನ್ನಿಸಲೇಬೇಕೆಂದಿಲ್ಲ. ಆದರೆ ಪ್ರತಿಯಾಗಿ ನಿಮಗನ್ನಿಸಿದ್ದನ್ನು ಹಂಚಿಕೊಂಡರೆ ಒಂದಿಷ್ಟು ಹೊಸ ವಿಚಾರಗಳನ್ನು ತಿಳಿದೇನೆಂಬ ಆಶಯದೊಂದಿಗೆ ಈ ಬರಹವನ್ನು ಮುಗಿಸುತ್ತಿದ್ದೇನೆ.