Monday 20 July 2015

ಅಧಿಕ ಪ್ರಸಂಗ

      ಎರಡು ದಿನ ಕಛೇರಿಗೆ ರಜೆ ಹಾಕಿ ಊರಿಗೆ ಹೋದೆನೆಂದರೆ ಶಾಲೆಗೊಮ್ಮೆ ಭೇಟಿ ಕೊಡುವುದುಂಟು. ಆದರದು ನಾನು ಓದಿದ ಶಾಲೆ ಎಂಬ ಒಣ ಅಭಿಮಾನದಿಂದಲ್ಲ; ಬದಲಿಗೆ ಮನೆಯಲ್ಲಿ ಕುಳಿತು ಹೊತ್ತು ಹೋಗದ್ದಕ್ಕೆ. ಏಳು ತರಗತಿಗಳು ಸೇರಿ ಎಪ್ಪತ್ತು ವಿದ್ಯಾರ್ಥಿಗಳಿರುವ ತುಂಬು ಶಾಲೆ ಅದು. ಓದೋ ಮಕ್ಕಳಿಗೆ (ಓದದೇ ಇರುವವರಿಗೂ ಸಹ) ಬಿಸಿಯೂಟ, ಹಾಲು ಭಾಗ್ಯ, ಮೊಟ್ಟೆ ಭಾಗ್ಯವೂ ದೊರೆಯುತ್ತಿರುವ ಕಾರಣ ಪೋಷಕರೂ ಖುಷಿಯಿಂದ ಮಕ್ಕಳನ್ನು ಶಾಲೆಗೆ ಕಲಳಿಸುತ್ತಿದ್ದಾರೆ. ಮತ್ತೊಂದು ವರದಾನವೆಂದರೆ ಅಕ್ಕ ಪಕ್ಕದ ಊರುಗಳಲ್ಲಿ ವಿದ್ಯಾರ್ಥಿಗಳಿಲ್ಲ ಎಂಬ ಕಾರಣಕ್ಕೆ ಹೈಯರ್ ಪ್ರೈಮರಿ ಸ್ಕೂಲುಗಳನ್ನು ಮುಚ್ಚಿದ್ದು. ಇದರ ಜೊತೆಗೆ 'ತಮ್ಮಂತೆ ತಮ್ಮ ಮಕ್ಕಳು ವಿದ್ಯೆ ಕಲಿಯದೆ ಹಾಳಾಗಬಾರದು' ಎಂಬ ಹೆತ್ತವರ ಕಾಳಜಿಯೂ, 'ತಾವು ಜೀವನದಲ್ಲಿ ಕಲಿತ ಪಾಠವನ್ನು ಮುಂದಿನ ತಲೆಮಾರಿಗೆ ತಲುಪಿಸಬೇಕು' ಎನ್ನುವ ಶಾಲಾ ಶಿಕ್ಷಕರ ಕಕ್ಕುಲತೆಯೂ ಸೇರಿದೆ. ಇಂತಿಪ್ಪ ನಮ್ಮೂರ ಶಾಲೆಗೆ ೩ ಜನ ಶಿಕ್ಷಕರು. ಸರದಿಯಂತೆ ಒಬ್ಬೊಬ್ಬರು ಒಂದೊಂದು ದಿನ ಅಡಿಗೆಯ ಉಸ್ತುವಾರಿಯನ್ನು ವಹಿಸಿಕೊಳ್ಳುವರು. ಇವರನ್ನೆಲ್ಲಾ ಒಮ್ಮೆ ಮಾತಾಡಿಸಿ ಬರೋಣವೆಂದು ಅತ್ತ ಹೆಜ್ಜೆ ನೆಟ್ಟೆ.

      ಹಳ್ಳಿಯ ಹಳೆಯ ಸರ್ಕಾರಿ ಶಾಲೆಯಲ್ಲಿ ತರಗತಿಯ ಮಧ್ಯೆ ಹೋಗಿ ಮೇಷ್ಟರನ್ನು ಮಾತನಾಡಿಸಕೂಡದು ಎಂಬ ನಿರ್ಬಂಧವಿಲ್ಲದ್ದರಿಂದ ಕ್ಲಾಸ್ ರೂಂ ಒಂದರತ್ತ ಸುಳಿದೆ. ಕನ್ನಡ ಮೇಷ್ಟ್ರು ಆರನೇ ತರಗತಿಗೆ 'ಸೋದರ ವಾತ್ಸಲ್ಯ' ಅನ್ನೋ ಪಾಠ ಹೇಳ್ತಿದ್ರು. ನಾನು ಹೊರಗಿನಿಂದಲೇ "ನಮಸ್ಕಾರ ಸಾರ್" ಅಂದೆ. ಅವರು ತರಗತಿಯೊಳಗಿಂದಲೇ ಒಮ್ಮೆ ಕಣ್ಣು ಕಿರಿದು ಮಾಡಿ ನೋಡಿ "ಹೋ.. ಬಾಲು. ಬಾರಯ್ಯಾ ಬಾ. ಎಷ್ಟು ಸಮಯ ಆಯ್ತು ಮಾರಾಯ ನಿನ್ನನ್ನು ನೋಡಿ. ಎಲ್ಲಿದ್ದೀ ಈಗ, ಏನು ಮಾಡ್ಕೊಂಡಿದ್ದೀ " ಎನ್ನುವ ಪ್ರಶ್ನೆಗಳ ಮಳೆಯನ್ನೇ ಸುರಿದರು.
       "ಎಷ್ಟು ಸಮಯ ಏನು ಬಂತು ಸಾರ್, ನಾಲ್ಕು ತಿಂಗಳ ಮುಂಚೆ ಆಲ್ವಾ ಬಂದಿದ್ದು. ಈಗ ಬಾಂಬೆಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದೀನಿ" ಅವರ ಮರೆವನ್ನು ಮರೆಸುವ ಪ್ರಯತ್ನ ಮಾಡಿದೆ. 
      "ಹೋs.. ಇನ್ನೂ ಅಲ್ಲೇ ಇದೀಯಾ"
      "ಮತ್ತಿನ್ನೇನು ಸಾರ್, ನೀವೂ ೧೫ ವರ್ಷದಿಂದ ಇಲ್ವಾ ಇದೇ ಊರಲ್ಲಿ. ನಂದಿನ್ನೂ ಒಂದು ವರ್ಷ ಆಯ್ತು ಅಷ್ಟೆ."
      ಮೇಷ್ಟ್ರು ತಮ್ಮ ಬೊಚ್ಚು ಬಾಯನ್ನೊಮ್ಮೆ ತೆರೆದು ನಕ್ಕು ಬಿಟ್ಟು, ಆ ಸಣ್ಣ ಮಕ್ಕಳ ಮುಂದೆ ನನ್ನ ಮಾನ ಕಳೆಯುವ ಕೆಲಸ ಶುರು ಮಾಡಿದ್ರು.
      "ಇವ್ನು ಬಾಲಚಂದ್ರ ಅಂತ. ಇದೇ ಸ್ಕೂಲಲ್ಲಿ ಓದಿದ್ದು. ನಿಮ್ಮ ಥರಾನೇ ಚಿಕ್ಕ ಚಿಕ್ಕ ಚಡ್ಡಿ ಹಾಕ್ಕೊಂಡು ಬರ್ತಿದ್ದ. ಇವತ್ತು ಸೂಟು ಬೂಟು ಹಾಕೋ ಇಂಜಿನಿಯರ್ರು." ಅನ್ನೋ ಮಾತುಗಳೊಂದಿಗೆ ಮೊದಲ್ಗೊಂಡು ಇನ್ನೂ ಕನಸು ಕಾಣಲು ಕಣ್ತೆರೆಯುತ್ತಿರುವ ಪುಟ್ಟ ಮಕ್ಕಳ ಮುಂದೆ ಗುರಿ ಎಂಬ ಗುಂಡಿ ತೋಡಿ, ಕನಸೆಂಬ ಕೂಸು ಹುಟ್ಟುವ ಮೊದಲೇ ಭ್ರೂಣಹತ್ಯೆಗೈಯುವ ಪ್ರಯತ್ನ ನಡೆಯಿತು. ಇದೇ ರೀತಿ ನಿತ್ಯದತ್ಯಾಚಾರಕ್ಕೆ ಹುಟ್ಟಿದ ಪದವಿಯೇ ಸಾಫ್ಟ್ ವೇರ್ ಇಂಜಿನಿಯರ್ರು ಎಂಬ ಆಲೋಚನೆ ಬಂದಾಗೊಮ್ಮೆ ಮನಸ್ಸು ಕಹಿಯಾಯಿತು. ಮಕ್ಕಳನ್ನು ಅವರ ಪಾಡಿಗೆ ಓದಲು ಬಿಟ್ಟ ಮೇಷ್ಟ್ರು ನನ್ನೊಡನೆ ಮಾತನಾಡಲೆಂದು ಹೊರಬಂದರು. 
      "ಈಗಲೂ 'ಸೋದರ ವಾತ್ಸಲ್ಯ' ಪಾಠ ಹೇಳಬೇಕಾದರೆ ಇಡೀ ರಾಮಾಯಣನೇ ಹೇಳ್ತೀರಾ ಸಾರ್" ನಾನು ಮಾತು ಶುರು ಮಾಡಿದೆ. 
      "ನಾನೇನೋ ಹೇಳ್ತೀನಿ ಕಣೋ ಬಾಲು, ಆದ್ರೆ ಈಗಿನ ಹುಡುಗ್ರು ಕೇಳ್ಬೇಕಲ್ವಾ. ನಿಮ್ಗಾದ್ರೆ ಬೆತ್ತ ಹಿಡಿದಾದ್ರೂ ಹೇಳಿ ಕೊಡ್ತಿದ್ವಿ. ಈಗಿನ ಪರಿಸ್ಥಿತಿ ಹಾಗಿಲ್ಲ. ಇದ್ದ ಬೆತ್ತಗಳೆಲ್ಲಾ ಬಿಸಿಯೂಟದ ಒಲೆಗೆ ಕಟ್ಟಿಗೆಯಾಗಿ ಹೋದ್ವು"
      "ಅದು ಸಹಜ ಆಲ್ವಾ ಸಾರ್. ಮಳೆಗಾಲದಲ್ಲೂ, ಬೇಸಿಗೇಲೂ ಒಂದೇ ಬಿತ್ತನ್ನ ಬಿತ್ತಿದ್ರೆ ಫಲ ಒಂದೇ ಥರ ಕೊಡ್ತದಾ"
      "ಆದರೆ ರಾಮ ಬಾಳಿ ಬದುಕಿದ ರೀತಿ, ಅವನ ಆದರ್ಶಗಳು ಸಾರ್ವಕಾಲಿಕ ಸತ್ಯ ಕಣೋ ಬಾಲು. ಅದರಂತೆ ನಡೆದಲ್ಲಿ ಪ್ರತಿಯೊಬ್ಬನ ಬಾಳೂ ಬೆಳಗುತ್ತೆ."
      "ನಿಮಗೆಲ್ಲೋ ಭ್ರಾಂತು ಸಾರ್. ರಾಮಾಯಣದಲ್ಲಿ ನಾವು ಕಾಣೋದೇನು; ರಾಮ ಉತ್ತಮೋತ್ತಮ, ರಾವಣ ನೀಚಾದಿನೀಚ. ಸದ್ಗುಣಗಳು ದುರ್ಗುಣಗಳನ್ನು ನಾಶ ಮಾಡೋ ಒಂದು ಪ್ರಕ್ರಿಯೆ ಆಲ್ವಾ ಸಾರ್ ರಾಮಾಯಣ. ನೀವೂ ಇಷ್ಟು ವರ್ಷದಿಂದ ರಾಮಾಯಣ ಪಾರಾಯಣ ಮಾಡಿದೀರ, ಈಗ ನೀವು ರಾಮನೋ, ರಾವಣನೋ?"
      ಕಡೆಯ ಪ್ರಶ್ನೆಯಿಂದ ಮೇಷ್ಟ್ರು ಸ್ವಲ್ಪ ಗಲಿಬಿಲಿಗೊಂಡಂತಿತ್ತು. "ಹೀಗೆ ಕೇಳಿದ್ರೆ ಏನಯ್ಯಾ ಹೇಳೋದು; ನಾನು ರಾಮನಲ್ಲದಿದ್ದರೂ ರಾವಣನಂತೂ ಅಲ್ಲ" ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಇತ್ತು ಮೇಷ್ಟ್ರು ಕೊಟ್ಟ ಉತ್ತರ. 
      "ನಿಜ ಸಾರ್. ಇವತ್ತಿನ ಪ್ರಪಂಚದಲ್ಲಿ ರಾಮನಷ್ಟು ಉದಾತ್ತ ವ್ಯಕ್ತಿ ಯಾರೂ ಇಲ್ಲ; ಅದೇ ರೀತಿ ರಾವಣನಷ್ಟು ಉಡಾಳನೂ ಇಲ್ಲ. ಕೇವಲ ಅವರವರ ದೃಷ್ಟಿಯಿಂದಾದರೂ ಅವರವರಿಗೆ ಸತ್ಯ ಇದು. ಇಂತಹ ಮಧ್ಯಮ ಮನಸ್ಥಿತಿಯ ಪಾತ್ರಗಳ ವಿಸ್ತಾರವೇ ಇಲ್ಲ ನಿಮ್ಮ ರಾಮಾಯಣದಲ್ಲಿ. ಹಾಗಾಗಿ ರಾಮಾಯಣ ಅನ್ನೋದು ಕೆಲವೇ ಜನರ ಸೋಲು ಮತ್ತು ಗೆಲುವಿನ ಕಥೆಯಾಗಿದೆಯೇ ಹೊರತು ನಮ್ಮ ನಿಮ್ಮ ಬದುಕಿಗೆ ಹಿಡಿದ ಕನ್ನಡಿಯಾಗಿ ಎಂದೂ ಕಂಡಿಲ್ಲ. ಅಥವಾ ನಮ್ಮ ಹಿರಿಯರು ನಮಗೆ ಕಾಣಿಸಿಲ್ಲ." ನನ್ನ ವಾದ ಮುಂದಿಟ್ಟೆ.
      "ಅಯ್ಯೋ ನಾಸ್ತಿಕ ಮುಂಡೆಮಗನೇ, ರಾಮಾಯಣ ಸುಳ್ಳು ಅಂತ ಏನೋ ನೀನು ಹೇಳೋದು" ಮೇಷ್ಟರಿಗೆ ಸಿಟ್ಟು ಬಂದಿತ್ತು. 
      "ಪ್ರಶ್ನೆ ರಾಮಾಯಣದ ಸತ್ಯಾಸತ್ಯತೆಯದ್ದು ಅಲ್ಲ ಸಾರ್. ಆದರೆ ಎಲ್ಲರಲ್ಲೂ ರಾಮನ ಆದರ್ಶಗಳನ್ನು ಬಿತ್ತುವ ನೆಪದಲ್ಲಿ ಇವತ್ತಿನ ಜನಾಂಗದಲ್ಲಿ ನಾವು ಯಾವ ತರಹದ ದ್ವಂದ್ವವನ್ನು ಹುಟ್ಟಿಸ್ತಿದೀವಿ ಅನ್ನೋದು."
      "ಏನಪ್ಪಾ ನೀನು ಹೇಳ್ತಿರೋದು" ಮೇಷ್ಟರು ಸ್ವಲ್ಪ ಮೆತ್ತಗಾಗಿದ್ದರು. 
      "ರಾಮನ ಬಾಲ್ಯ ಮತ್ತು ಇವತ್ತಿನ ಮಕ್ಕಳ ಬಾಲ್ಯ ಹೋಲಿಸಿ ನೋಡಿ. ರಾಮ ತನ್ನ ಬಾಲ್ಯವನ್ನು ತನ್ನ ಅಪ್ಪ ಅಮ್ಮಂದಿರ ಜೊತೆ ಅರಮನೆಯ ಸುಪ್ಪತ್ತಿಗೆಯಲ್ಲಿ ಕಳೆದ. ಅವನಿಗೆ ಮನೆಯಲ್ಲಿಯೇ ಪಾಠ ಹೇಳಿಕೊಡೋಕೆ ವಸಿಷ್ಠರು. ಲೋಕಜ್ಞಾನವನ್ನು ಕಲಿಸಲು ವಿಶ್ವಾಮಿತ್ರರು. ಇವತ್ತಿನ ಮಕ್ಕಳ ಗತಿ ನೋಡಿ. ಸುಪ್ಪತ್ತಿಗೆ ಇರುವ ಪಟ್ಟಣದ ಮಕ್ಕಳು ತಿಂಗಳು ಆರು ತುಂಬುವುದರೊಳಗೆ ಇನ್ನಾರದೋ ಕೈ ಸೇರಿ ಅಪ್ಪ ಅಮ್ಮನ ಪ್ರೀತಿಯಿಂದ ವಂಚಿತರಾಗುತ್ತವೆ. ಅಪ್ಪ ಅಮ್ಮನ ಜೊತೆ ಬೆಳೆಯುವ ಹಳ್ಳಿ ಮಕ್ಳಿಗೆ ತುತ್ತು ಹಿಟ್ಟಿಗೂ ತತ್ವಾರ. ಅದಕ್ಕೇ ನಿಮ್ಮ ನಳಪಾಕ ತಿನ್ನೋಕೆ ಶಾಲೆಗೆ ಬರ್ತವೆ. ಇನ್ನು ಹಳ್ಳಿ ಮತ್ತು ದಿಲ್ಲಿಗಳೆರಡರಲ್ಲೂ ೧೦೦% ಮಾರ್ಕ್ಸು ತಗೋಳ್ಳೋದೇ ಜ್ಞಾನ ಸಂಪಾದನೆ ಅನ್ನೋ ಭಾವನೆ ಬೆಳೆದುಬಿಟ್ಟಿದೆ."
      "ಹ್ಞೂ.. ಅದು ನಿಜ." 
      "ಮೊನ್ನೆ ಬಾಂಬೆಯಲ್ಲಿ ನಮ್ಮ ಪಕ್ಕದ ಮನೆಯ ಮಗುವಿಗೆ ಇದೇ ರಾಮಾಯಣ ಕಥೆ ಹೇಳ್ತಾ ಇದ್ದೆ. ಆ ನರ್ಸರಿ ಓದೋ ಮಗು ಏನೇನು ಪ್ರಶ್ನೆ ಕೇಳ್ತು ಗೊತ್ತಾ."
      "ಏನು ?"
      "ರಾಮನ ಡ್ಯಾಡಿ ಮಮ್ಮಿ ಆಫೀಸಿಗೆ ಹೋಗ್ತಿರ್ಲಿಲ್ವಾ ಅಂತ ಕೇಳ್ತು. ರಾಜಪ್ರಭುತ್ವದ ಆ ದಿನಗಳಲ್ಲಿ ಜನರ ಸಂಪಾದನೆಯ ಭಾಗವನ್ನು ಕಸ್ಕೊಂಡು ಆಲ್ವಾ ಸಾರ್ ರಾಜರು ಬದುಕ್ತಿದ್ದಿದ್ದು. ಅವ್ರಿಗೆಲ್ಲಾ ಏನು ಆಫೀಸು. ಅದು ಬೇಡ ಅಂತ ಆಲ್ವಾ ಪ್ರಜಾ ಪ್ರಭುತ್ವ ಬಂದಿದ್ದು."
      "ಬಾಲು, ಇವತ್ತಿಗೆ ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವವೂ ಉಳಿದಿಲ್ಲ. ಈಗೇನಿದ್ರೂ ಪಕ್ಷಪ್ರಭುತ್ವ. ಒಬ್ಬೊಬ್ಬ ಮತದಾರನೂ ಒಂದೊಂದು ಪಕ್ಷದ ದಾಸ. ಆ ಮಾತು ಬಿಡು, ಮತ್ತಿನ್ನೇನು ಕೇಳ್ತು ಆ ಮಗು" 
      "ರಾಮನಿಗೆ ಯಾರೂ ಫ್ರೆಂಡ್ಸ್ ಇರ್ಲಿಲ್ವಾ ಅಂಕಲ್ ಅಂತಂದು ತನಗಿರೋ ಫ್ರೆಂಡ್ಸ್ ಗಳ ಹೆಸರನ್ನಷ್ಟೂ ಹೇಳ್ತು"
      "ಗುಹ, ಸುಗ್ರೀವ, ಹನುಮಂತ ಎಲ್ಲಾ ರಾಮನ ಫ಼್ರೆಂಡ್ಸುಗಳೇ ಅಲ್ವೇನೋ. ಹೇಳ್ಲಿಲ್ವಾ ನೀನು ?" ಎಲ್ಲಾ ಪ್ರಶ್ನೆಗಳ ಉತ್ತರ ಸಿಕ್ಕಿತೆನ್ನುವಂತಹ ಖುಷಿಯಲ್ಲಿ ನುಡಿದರು ಮೇಷ್ಟರು. 
      "ಅವಳಿನ್ನೂ ಪುಟ್ಟ ಮಗು ಸಾರ್. ಬಾಲ್ಯದ ಗೆಳೆಯರ ಬಗ್ಗೆ ಕೇಳಿದ್ದು."
      ಮೇಷ್ಟ್ರು ಗಾಢವಾಗಿ ಎನೋ ಯೋಚಿಸುತ್ತಿದ್ದರು. ನಾನು ಮಾತು ಮುಂದುವರೆಸಿದೆ. "ಇನ್ನೂ ಸ್ವಲ್ಪ ದೊಡ್ಡೋರಿಗೆ ಕಥೆ ಹೇಳೋಕೂ ಭಯವಾಗುತ್ತೆ ಸಾರ್. ರಾಮನಿಗೆ ಎಷ್ಟು ಮಾರ್ಕ್ಸ್ ಬಂದಿತ್ತು ; ಅವನ ಫ್ರೆಂಡ್ಸ್ ಗೆ ಎಷ್ಟು ಬಂತು ; ರಾಮ ಫಸ್ಟ್ ಕ್ಲಾಸ್ ಪಾಸು ಮಾಡಿ ಏನೇನೋ ಆದ, ಉಳಿದೋರೆಲ್ಲಾ ಏನಾದ್ರು ; ಅವರಿಗೆಲ್ಲಾ ಯಾವ ಕಾಲೇಜಲ್ಲಿ ಸೀಟು ಸಿಕ್ತು ; ಯಾವ ಕಂಪನಿಯಲ್ಲಿ ಕೆಲಸ ಸಿಕ್ತು ; ಸಂಬಳ ಎಷ್ಟು ; ಆನ್ ಸೈಟ್ ಎಷ್ಟು ಸಲ ಹೋದ ; ಅಂತೆಲ್ಲಾ ಕೇಳಿದ್ರೆ ಏನು ಹೇಳೋದು ಸಾರ್ ?" ನಾನು ಪ್ರಶ್ನಿಸಿದೆ. 
      "ಅಧಿಕ ಪ್ರಸಂಗ ಅನ್ನೋದು." ಮೇಷ್ಟರು ಗುರುಗುಟ್ಟಿದರು.
      ಭಿನ್ನವಾದ ವಾತಾವರಣವನ್ನು ಸೃಷ್ಟಿಸುತ್ತಿರುವವರು ನಾವು. ಮತ್ತೆ ಹಳೆಯ ಬೀಜವನ್ನೇ ಬಿತ್ತುವವರೂ ನಾವು. ಬದಲಾದ ಸನ್ನಿವೇಶದಲ್ಲೂ ಹಿಂದಿನ ಫಲವನ್ನೇ ಅಪೇಕ್ಷಿಸುತ್ತಿರುವುದೂ ನಾವು. ಮೌಲ್ಯಗಳನ್ನು ಒಂದು ಪಠ್ಯವಸ್ತುವಾಗಿ ಸೀಮಿತಗೊಳಿಸಿ, ಅದರಲ್ಲಿ 'ಎ' ಗ್ರೇಡು ಗಳಿಸಿದ ಬಳಿಕವೂ ಆತನಲ್ಲಿ ಮೌಲ್ಯವಿಲ್ಲ ಎಂದು ಜರಿಯುವುದು ಎಷ್ಟು ಸರಿ. ಆತನಲ್ಲಿ ಮೌಲ್ಯಗಳಿಲ್ಲದಿದ್ದಲ್ಲಿ ಸರ್ಟಿಫಿಕೇಟು ಕೊಡುವ ದರ್ದು ಏನಿತ್ತು. ಕೇಳಿದರೆ ಅಧಿಕ ಪ್ರಸಂಗವಾದೇತೇನೋ. ಇಂತಿಪ್ಪ ಯೋಚನಾ ಲಹರಿಯನ್ನು ತುಂಡರಿಸಲು ವಿಜ್ಞಾನದ ಮೇಷ್ಟರು ಬಂದರು. 
      "ಇಂಜಿನಿಯರ್ ಸಾಹೇಬ್ರು, ಯಾವಾಗ ಬಂದ್ರಿ; ನಡೀರಿ ಒಂದು ಟೀ ಕುಡಿದು ಬರುವ" ಮುಖದಲ್ಲಿ ನಗು ತುಂಬಿಕೊಂಡು ನುಡಿದ ಅವರಿಗೆ ಪ್ರತಿಯಾಗಿ "ಹೀಗೆಲ್ಲಾ ಹೇಳಿ ಮರ್ಯಾದೆ ತೆಗೀಬೇಡಿ ಸಾರ್." ಎಂದೆ. 
      "ಮರ್ಯಾದೆ ತೆಗಿಯೋದಲ್ಲ ಕಣೋ ಬಾಲು, ಕೊಡ್ತಿರೋದು; ನಾವೇನಿದ್ರೂ ಈ ಹಳ್ಳಿ ಮನೆಗೆ ಮೇಷ್ಟ್ರು. ನೀನು ಬಾಂಬೆಗೇ ಇಂಜಿನಿಯರ್ರು" ಮತ್ತೆ ನಗೆಯಾಡಿದರು. ಅವರನ್ನು ಮಾತಲ್ಲಿ ಗೆದ್ದವರಿಲ್ಲ. ಇಬ್ಬರೂ ಕನ್ನಡ ಮೇಷ್ಟರಿಗೆ ವಿದಾಯ ಹೇಳಿ ಬಸ್ ಸ್ಟಾಪ್ ಬಳಿಯ ಸಣ್ಣ ಗೂಡಂಗಡಿ ಕಡೆ ನಡೆದೆವು.


Thursday 5 February 2015

ಹೊರಗಿನ ಬೆಟ್ಟವನ್ನೊರಗಿದೊಂದು ದಿನ

ಕೊಕ್ಕೊಕೋ..ಕೋ.. ಕೊಕ್ಕೊಕೋ..ಕೋ.. ​ಬೆಳ್ಳಿ ಮೂಡುವ ಮೊದಲೇ ಕೋಳಿ ಕೂಗಿತ್ತು. ಅದರ ಕೂಗಿಗೇ ನನಗೆ ಎಚ್ಚರವಾಗಿದ್ದೆಂಬುದು ಸುಳ್ಳು. ನಾಲ್ಕೂ ಮುಕ್ಕಾಲಿಗೆ ಕೂಗಿಕೊಳ್ಳುವಂತೆ ಇಟ್ಟಿದ್ದ ಅಲರಾಮು ಕೂಡ ಇನ್ನೂ ಕೂಗಿಕೊಳ್ಳದ್ದರಿಂದ ಯಾವುದೋ ಕನಸು ಬಿದ್ದೇ ಎಚ್ಚರವಾಗಿದ್ದಿರಬೇಕು. ಹೀಗೆ ಎಚ್ಚರವಾದ ಜೀವಕ್ಕೆ ಆ ಕೋಳಿಗಳ ಕೂಗು ಕೇಳಿದೆ ಎಂಬುದೇ ಪರಮ ಸತ್ಯ. ಅಂಥದ್ದೇ ಇನ್ನೊಂದು ಸತ್ಯ ಏನಪ್ಪಾ ಅಂದ್ರೆ, ಒಂದಾನೊಂದು ಕಾಲದಲ್ಲಿ, ಮಲೆನಾಡಿನ ಮೂಲೆಯಲ್ಲಿದ್ದ ಸೋಮನಹಳ್ಳಿಯ ಮುದುಕಿ ತನ್ನ ಕೋಳಿಯ ಕೋಗಿಗೇ ಬೆಳಗಾಗುವುದು ಎಂಬ ಭ್ರಮೆಯಲ್ಲಿದ್ದಂತೆ, ಕೋಳಿ ಕೂಗು ಕೇಳಿ ಬೆಳಗಾಯ್ತೆಂದು ನೀವಂದುಕೊಂಡಿರಾದರೆ ಮಧ್ಯರಾತ್ರಿಯಲ್ಲಿ ನಿದ್ದೆಯಿಂದೆದ್ದು ಕೂರಬೇಕಾದೀತೆಂಬುದು. ರಸ್ತೆಯುದ್ದಕ್ಕೂ ಇದ್ದ ಬೀದಿ ದೀಪಗಳಲ್ಲಿ ಯಾರದೇ ಪ್ರತಿಭಟನೆ, ಮುಷ್ಕರಗಳಿಗೆ ಆಹಾರವಾಗದೇ ಉಳಿದ ಕೆಲವು ಸೋಡಿಯಂ ದೀಪಗಳನ್ನೇ ಒಬ್ಬೊಬ್ಬ ಸೂರ್ಯ ಎಂದು ತಿಳಿದು ರಾತ್ರಿಯಿಡೀ ಕೂಗುತ್ತವೆ ಇಂದಿನ ಕೋಳಿಗಳು. ಇಂತಹ ಕೋಳಿರವವನ್ನು ಹೊತ್ತು ಮೂಡುವ ಮೊದಲೇ ಕೇಳುತ್ತಾ ಎದ್ದು, ನಿತ್ಯಕರ್ಮಗಳನ್ನು ಮುಗಿಸಿಕೊಂಡೆ. ಮಧ್ಯದಲ್ಲಿ ಕೈಕೊಟ್ಟ ಕರೆಂಟಿಗೆ ​ಮನದಲ್ಲೇ ಹಿಡಿ ಶಾಪ ಹಾಕುತ್ತಾ, ಕತ್ತಲಲ್ಲೇ ತಲೆ ಬಾಚಿಕೊಂಡು, ನೀರಿನ ಬಾಟಲು, ಹ್ಯಾಟುಗಳನ್ನು ಹೆಗಲ ಚೀಲಕ್ಕೆ ತುರುಕಿ, ಶೂ ಮೆಟ್ಟುವಷ್ಟರಲ್ಲಿ ಹೋದ ಕರೆಂಟು ವಾಪಸ್ಸು ಬಂದು ಒಳಗೆ ಉರಿಯುತ್ತಿದ್ದ ಟ್ಯೂಬ್ ಲೈಟು ನಾನು ಸ್ವಿಚ್ ಆಫ್ ಮಾಡಲು ಮರೆತಿದ್ದನ್ನು ನೆನಪಿಸಿದ್ದಕ್ಕೆ ತೊಟ್ಟಿದ್ದೊಂದು ಬೂಟನ್ನು ಬಿಚ್ಚಿ ದೀಪ ಆರಿಸಿ ಬಂದೆ. ಮತ್ತೇನೂ ಮರೆತಿಲ್ಲ ಎಂಬ ಖಾತ್ರಿ ಆದೊಡನೆ ಎರಡೂ ಶೂ ಕಟ್ಟಿಕೊಂಡು ಮನೆಯಿಂದ ಹೊರಟೆ.

ಗಂಟೆ ಆರಾಗುತ್ತಾ ಬಂದಿತ್ತು. ೬.೫೦ರೊಳಗೆ ಎಲ್ಲರೂ ಬಸ್ಸು ನಿಲ್ದಾಣ ತಲುಪಿರಬೇಕೆಂದು ನಿಗದಿಯಾಗಿತ್ತು. ಐಸೋಲೇಶನ್ ಸ್ಟಾಪ್ ಬಳಿ ಮೆಜೆಸ್ಟಿಕ್ ಕಡೆಗೆ ಹೋಗುವ ಬಸ್ಸಿಗಾಗಿ ಕಾಯುತ್ತಾ ನಿಂತೆ. ಸಮಯ ಕಳೆಯಲೆಂದು ಫೋನಿನಲ್ಲೇ ಇದ್ದ ಎಫ್.ಎಂ. ಆನ್ ಮಾಡಿ ಇಯರ್ ಫೋನನ್ನು ಕಿವಿಗೆ ಚುಚ್ಚಿಕೊಂಡೆ. ಭಕ್ತಿಗೀತೆಗಳ ಕಾರ್ಯಕ್ರಮ ಶುರುವಾಗಿತ್ತು. ಲೋಕದ ಕಣ್ಣಿಗೆ ನಾನೊಬ್ಬ ನಾಸ್ತಿಕನಾಗಿರುವುದರಿಂದಲೂ , ಸ್ವಭಾವತಃ ನಾನು ಎಲ್ಲರಂತಹ ಆಸ್ತಿಕನಲ್ಲದ್ದರಿಂದಲೂ ಆ ಕೀರ್ತನೆಗಳನ್ನು ಕೇಳುವ ಮನಸ್ಸಾಗದೆ ಚಾನೆಲ್ ಬದಲಾಯಿಸುತ್ತಾ ಹೋಗಿ ಸುಮಧುರ ಹಿಂದಿ ಚಿತ್ರಗೀತೆಗಳನ್ನು ಕೇಳುತ್ತಾ ನಿಂತೆ. ಸ್ವಲ್ಪ ಹೊತ್ತಿನಲ್ಲಿ ಬಂದ ಬಸ್ಸಿನ ಬೋರ್ಡು ಕಾಣುವುದು ಆ ಕತ್ತಲೆಯಲ್ಲಿ ಶಕ್ಯವಿರಲಿಲ್ಲ. ಮುಂದಿನ ಬಾಗಿಲ ಬಳಿ ಸಾಗಿ 'ಮೆಜೆಸ್ಟಿಕ್' ಎನ್ನುತ್ತಾ ಡ್ರೈವರ್ ಕಡೆ ಪ್ರಶ್ನಾರ್ಥಕವಾಗಿ ನೋಡಿದೆ. 'ಹತ್ತು' ಎನ್ನುವಂತೆ ಆತ ಕತ್ತು ಆಡಿಸಿದ. ಬಸ್ಸನ್ನೇರಿ ಒಂದು ಸೀಟು ಹಿಡಿದು ಕೂರುವಷ್ಟರಲ್ಲಿ ಬಂದ ಕಂಡಕ್ಟರ್ ಮಹಾಶಯನ ಕೈಗೆ ೨೦ ರೋಪಯಿಗಳನ್ನಿಡುತ್ತಾ 'ಮೆಜೆಸ್ಟಿಕ್' ಅಂದೆ. ೧೯ ರೂಪಾಯಿಯ ಚೀಟಿಯನ್ನು ನನ್ನ ಕೈಗಿಟ್ಟು ಮುಂದೆ ಹೊರಟಿದ್ದ ಆತನನ್ನು ತಡೆದು, 'ಸಾರ್, ಒಂದು ರೂಪಾಯಿ ಚೇಂಜ್' ಅಂದಿದ್ದಕ್ಕೆ ಆತ ತನ್ನ ಪರ್ಸನ್ನೆಲ್ಲಾ ಹುಡುಕಿ ಎರಡು ರೂಪಾಯಿ ಪಾವಲಿ ಹೊರತೆಗೆದು 'ಒಂದು ರೂಪಾಯಿ ಇದ್ರೆ ಕೊಡಿ, ಎರಡು ರುಪಾಯಿ ಕೊಡ್ತೀನಿ' ಅಂದ. ಈಗ ನಾನು ಚೀಲವನ್ನೆಲ್ಲಾ ಹುಡುಕಿ ಕೈಗೆ ಸಿಕ್ಕ ೨'ಸಿಕ್ಕಾ'ಗಳಲ್ಲಿ ಒಂದನ್ನು ಅವನ ಕೈಗಿಟ್ಟು, ಆತ ಕೊಟ್ಟ ಎರಡು ರುಪಾಯಿಗಳನ್ನು ಬ್ಯಾಗಿಗೆ ತುರುಕಿಟ್ಟ ಬಳಿಕ ಕಿಟಕಿಯಿಂದ ಹೊರಗೆ ದೃಷ್ಟಿ ನೆಟ್ಟು ಕುಳಿತೆ.

ಮೆಜೆಸ್ಟಿಕ್ ತಲುಪುವ ವೇಳೆಗೆ ಗಂಟೆ ಆರೂವರೆಯ ಆಸುಪಾಸಿನಲ್ಲಿತ್ತು. ಬಸ್ಸಿಂದ ಇಳಿಯುವಲ್ಲಿ ಹಿಂದಿನ ಟ್ರೆಕ್ ಸಂದರ್ಭದಲ್ಲಿ ಪರಿಚಯವಾದೊಬ್ಬನನ್ನು ಭೇಟಿಯಾದೆ. ಒಟ್ಟಾಗಿ ಕೆ.ಎಸ್.ಆರ್.ಟಿ.ಸಿ ಯ ಮೂರನೇ ಟರ್ಮಿನಲಿನತ್ತ ನಡೆದೆವು. ದಾರಿಯುದ್ದಕ್ಕೂ ನಮ್ಮ ನಮ್ಮ ಮೂಗಿಗೆ ಅಡ್ಡ ಕೈಗಳನ್ನೊತ್ತಿ ಹೆಚ್ಚಿನ ರಕ್ಷಣೆ ಕೊಡುವ ಅನಿವಾರ್ಯತೆ ಇತ್ತು. ಸ್ವಲ್ಪವೇ ದೂರದಲ್ಲಿದ್ದ ಶೌಚಾಲಯವನ್ನು ನಿತ್ಯಕರ್ಮಗಳಿಗೆ ಉಪಯೋಗಿಸಿದಲ್ಲಿ ಅವು ಕಲುಷಿತಗೊಂಡು, ನಮ್ಮ ದೇಶ 'ಸ್ವಚ್ಛ ಭಾರತ್, ಶ್ರೇಷ್ಠ ಭಾರತ್' ಆಗುವುದು ತಪ್ಪೀತೆಂದು ಬೆದರಿಯೋ, ಇಲ್ಲವೇ ರಸ್ತೆ ಬದಿಯಲ್ಲಿ ವಿಪರೀತ ಜನಜಂಗುಳಿಯಾಗುವುದನ್ನು ತಪ್ಪಿಸಲು ಏಕಮಾತ್ರ ವಿಧಾನವೆಂದು ತಿಳಿದೋ ಕೆಲ ಜನರು ಇಂದಿಗೂ ಈ ಅಭಿಯಾನವನ್ನು ಮುನ್ನಡೆಸಿಕೊಂಡೇ ಇರುವರು. ಯಾವುದು ಎಂದು ಬಾಯ್ಬಿಟ್ಟು ಹೇಳುವ ಅಗತ್ಯವಿಲ್ಲವಷ್ಟೇ. 'ಇಡೀ ಬೆಟ್ಟವನ್ನಾದರೂ ಸ್ವಚ್ಚಗೊಳಿಸೇವು, ಇದು ಮಾತ್ರ ಸಾಧ್ಯವಾಗದೇನೋ' ಎರಡು ವಾರದ ಹಿಂದೆ ಸ್ಕಂದಗಿರಿಯ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದ್ದ ನೆನಪಿನಲ್ಲೇ ಆಡಿದ ಮಿತ್ರರ ಮಾತಿಗೆ ಪ್ರತಿಯಾಗಿ 'ಜನರ ಮನಸ್ಸು, ಬುದ್ಧಿಗಳು ಸ್ವಚ್ಚವಾದಂದು ಹೊರ ಜಗತ್ತಿಗೆ ಯಾರೂ ಸ್ವಚ್ಚತೆಯ ಪಾಠ ಹೇಳುವ ಅಗತ್ಯವೇ ಇರಲಾರದು' ಎಂಬ ನೆನಪೂ ಹತ್ತಿ ಒಮ್ಮೆ ಮುಗುಳ್ನಕ್ಕೆ. ಬೇಗ ಹೋದೆವೆಂದರೆ ಉಳಿದವರಿಗಾಗಿ ಕಾಯುವ ಕೆಲಸ. ಕೆಲವರಿಗೆ ‘ಕಾಯಕವೇ ಕೈಲಾಸ’, ಇನ್ನೂ ಕೆಲವರಿಗೆ ‘ಕಾಯುವಿಕೆಯೇ ಕೈಲಾಸ’. ಗಂಟೆ ಎಳಾಗುವಷ್ಟರಲ್ಲಿ ಒಂದಿಷ್ಟು ಜನ ಜಮಾಯಿಸಿದ್ದರು. ಅದಕ್ಕಿಂತಲೂ ಹೆಚ್ಚಿನ ಹೊತ್ತು ಕಾಯುವ ಅವಕಾಶವೂ ಇರಲಿಲ್ಲ. ಬಂದವರೆಲ್ಲಾ ಒಂದಾಗಿ, ಬರದವರನ್ನು ಬಿಟ್ಟು ಹೊರಡಲಣಿಯಾದೆವು. ಹೆಸರು ಕೊಟ್ಟು, ಬರುವುದನ್ನು ಖಚಿತಪಡಿಸಿದ್ದ ೨೦ ಮಂದಿಯಲ್ಲಿ, ೧೪ ಮಂದಿ ಬಂದಿದ್ದರು. ಎಂದಿನಂತೆ ಮೊದಲಿಂದ ಪರಿಚಯವಿದ್ದವರು ತಮ್ಮ ಪಾಡಿಗೆ ಹರಟುತ್ತಾ ಕುಳಿತರೆ, ನಾನೊಂದು ಮೂಲೆಯಲ್ಲಿ ಕೂತಿದ್ದೆ. ಈ ಹಿಂದೆ ಚೆನ್ನಗಿರಿಗೆ ಹೋದುದೇ ದಾರಿಯಾದ್ದರಿಂದ ಅಷ್ಟೇನೂ ಹೊರನೋಡುವ ಇಂಗಿತವಿರಲಿಲ್ಲ. ತಣ್ಣನೆ ಬೀಸುವ ಗಾಳಿಗೆ ಮುಖವೊಡ್ಡಿ ಸೀಟಿಗೊರಗಿ ಕುಳಿತಿದ್ದೆ. ಅಷ್ಟರಲ್ಲಿ ಕಂಡಕ್ಟರ್ ಬಂದು 'ಕಿಟಕಿ ಗ್ಲಾಸ್ ಕ್ಲೋಸ್ ಮಾಡ್ರಿ' ಅಂದ. ನಾನು ಮುಕ್ಕಾಲು ಭಾಗ ಮುಚ್ಚುವುದರಳೊಗೇ ಮತ್ತೊಮ್ಮೆ 'ಪೂರ್ತಿ ಮುಚ್ರೀ, ತುಂಬಾ ಕೋಲ್ಡ್ ಬರ್ತಾ ಇದೆ' ಅಂದ. ಪ್ರತಿಯಾಡದೇ ಕಿಟಕಿ ಮುಚ್ಚಿದ್ದರ ಜೊತೆಗೆ ಕಣ್ಣನ್ನೂ ಮುಚ್ಚಿ ತಲೆಯನ್ನು ಸೀಟಿಗೊರಗಿಸಿ ಕುಳಿತೆ.




ಎಲ್ಲರೂ ಏದುಸಿರು ಬಿಡುತ್ತಾ ಬೆಟ್ಟದ ಮೇಲೆ ತಲುಪಿದೆವು. ಒಬ್ಬೊಬ್ಬರು ಒಂದೊಂದು ದಿಕ್ಕಿಗೆ ಓಡಿ ಹಾರುವ ಮೋಡಗಳನ್ನು ಕೈಯಲ್ಲಿ ಹಿಡಿಯುವಂತೆ ಆಡುತ್ತಿದ್ದರು. ಮಧ್ಯೆ-ಮಧ್ಯೆ 'ವ್ಹಾವ್.. ಬ್ಯೂಟಿಫುಲ್', 'ಆಸ್ಸಮ್..' ಎಂಬಿತ್ಯಾದಿ ಉದ್ಗಾರಗಳು ಕೇಳಿ ಬರುತ್ತಿದ್ದವು. ಹಸಿರ ಸೊಬಗು ನಡೆದು ಬಂದ ದಣಿವನ್ನು ತಣಿಸಿದ್ದರೂ, ಹೊಟ್ಟೆ ಹಸಿವನ್ನು ಡಂಗುರ ಹೊಡೆದು ಸಾರುತ್ತಿತ್ತು. ಕಟ್ಟಿ ತಂದಿದ್ದ ಅನ್ನವನ್ನು ಉಣ್ಣಲೆಂದು ಎಲ್ಲರೂ ಸುತ್ತು ಕಟ್ಟಿ ಕುಳಿತೆವು. ನಾನೋ ಆತುರಾತುರವಾಗಿ ಮುಕ್ಕತೊಡಗಿದೆ. ಅನ್ನ ಗಂಟಲಲ್ಲಿ ಸಿಕ್ಕಿಕೊಂಡಿತು. 'ಖ್ಹಫ಼್.. ಖ್ಹವ್..' ನಾನು ಕೆಮ್ಮುತ್ತಿದ್ದೆ. ಮುಂದೆ ನೋಡಿದರೆ ನಮ್ಮ ತಂಡದಲ್ಲೊಬ್ಬ ಬಸ್ಸಿನಿಂದಿಳಿಯಲು ಸಿದ್ಧನಾಗಿದ್ದು ಕಂಡೆ. 'ಖ್ಹಫ಼್.. ಖ್ಹವ್..' ಕೆಮ್ಮು ಬರುತ್ತಲೇ ಇತ್ತು. ಉಳಿದೆಲ್ಲರೊಂದಿಗೆ ದೇವನಹಳ್ಳಿ ನಿಲ್ದಾಣದಲ್ಲಿ ಬಸ್ಸಿನಿಂದಿಳಿದೆ. ಕನಸಿನಲ್ಲಿ ಗಂಟಲು ಕಟ್ಟಿದ್ದಕ್ಕೆ ನಿಜವಾಗಿಯೂ ಕೆಮ್ಮಿದ್ದು ನೆನಪಾಗಿ ನಗು ಬರುತ್ತಿತ್ತು. ಜನ ಈತನಿಗೇತರ ಮರುಳು ಎಂದು ತಿಳಿದಾರೆಂದು ಸುಮ್ಮನಾದೆ. ಅಲ್ಲೇ ಇದ್ದ ಉಪಹಾರ ಗೃಹಕ್ಕೆ( ನೀವು ಮಂದಿರವೆಂದು ಕರೆದರೂ ನನ್ನ ಅಭ್ಯಂತರವೇನಿಲ್ಲ ) ತೆರಳಿ ಬೆಳಗ್ಗಿನ ಉಪಹಾರ ಮುಗಿಸಿ, ಮಧ್ಯಾಹ್ನಕ್ಕೆ ಚಿತ್ರಾನ್ನ ಮತ್ತು ವಡೆ ಪಾರ್ಸೆಲ್ ಕಟ್ಟಿಸಿಕೊಂಡು ಕಾರೇಹಳ್ಳಿ ಕ್ರಾಸ್ ಗೆ ಹೋಗುವ ಬಸ್ಸಿಗಾಗಿ ಕಾಯುತ್ತಾ ನಿಂತೆವು. ೯.೧೫ ರ ಬಸ್ಸು ಬರುವುದರೊಳಗೆ ಆಟೋಗಾಗಿ ಎರಡು ಸುತ್ತಿನ ವಿಫಲ ಮಾತುಕತೆ ಮುಗಿದಿತ್ತು. ಬಂದ ಬಸ್ಸಿಗೆ ಹತ್ತಿ ಕುಳಿತರೆ ಆತ ನಿಲ್ದಾಣದಲ್ಲೊಂದಿಷ್ಟು ಹೊತ್ತು, ಹೊರಗೆ ಮತ್ತೊಂದಿಷ್ಟು ಹೊತ್ತು ಕಾಯಿಸಿ ೧೦ ಗಂಟೆಯ ಸುಮಾರಿಗೆ ಕಾರೇಹಳ್ಳಿ ಕ್ರಾಸ್ ತಲುಪಿಸಿದ.

ಈ ಮೊದಲು ಹೊರಗಿನ ಬೆಟ್ಟಕ್ಕೆ ಚಾರಣಕ್ಕೆಂದು ಬಂದವರಾರೂ ತಂಡದಲ್ಲಿಲ್ಲದ್ದರಿಂದ ಬೆಟ್ಟದ ಬುಡಕ್ಕೆ ಸಾಗುವ ದಾರಿ ತಿಳಿಯುವಲ್ಲಿ ಸ್ವಲ್ಪ ಗೊಂದಲವಾಯ್ತು. ಪಕ್ಕದಲ್ಲಿದ್ದ ಆಟೋ ಚಾಲಕರಿಗೆ ಹೊರಗಿನ ಬೆಟ್ಟ ಎಂದೆವಾದರೆ ಅರ್ಥವಾಗುವಂತಿರಲಿಲ್ಲ. ಅವರ ಲೆಕ್ಕದಲ್ಲೇ ಹೇಳುವುದಾದರೆ ಬೆಟ್ಟದ ಬುಡ ತಲುಪಲು ೮-೧೦ ಕಿಲೋಮೀಟರುಗಳಷ್ಟು ದೂರವಾದೀತು. ಕೊನೆಗೆ ಈ ಹಿಂದೆ ಬಂದಿದ್ದ ಒಂದಿಬ್ಬರಿಗೆ ಕರೆ ಮಾಡಿ ತಿಳಿದ ದಾರಿಯ ಚಿತ್ರಗಳನ್ನು ತಿರುಗಿ ಕಳಿಸಿ ಖಾತ್ರಿ ಮಾಡಿಕೊಂಡು ಮುನ್ನಡೆದೆವು. ಇಷ್ಟಾಗುವಷ್ಟರಲ್ಲಿ ಕೆಲವು ಮಂದಿ ತೀರದ ದಾಹಕ್ಕೋ, ಆರದ ಆಸೆಗೋ ಒಂದೊಂದು ಎಳನೀರು ಕುಡಿದು ಮುಂದಿನ ಕಾಲ್ನಡಿಗೆಯ ಪ್ರಯಾಣಕ್ಕೆ ಸಿದ್ಧರಾಗಿದ್ದರು. ಉಳಿದವರಾರಿಗೂ ಆ ಹೊತ್ತಿನಲ್ಲಿ ಕುಡಿಯುವ ಉಮೇದು ಇಲ್ಲದ್ದರಿಂದ ಎಂದಿನಂತೆ ವರ್ತುಲಾಕಾರದಲ್ಲಿ ನಿಂತು ನಮ್ಮ ನಮ್ಮ ಪರಿಚಯ ಮಾಡಿಕೊಂಡಾದ ಬಳಿಕ ಸಂಘಟಕರ ಮುಂದಾಳತ್ವ ಹಾಗೂ ಹಿಂದಾಳತ್ವಗಳಲ್ಲಿ ಚಾರಣ ಶುರುವಾಯ್ತು.




ಆರಂಭದ ಒಂದಿಷ್ಟು ದೂರದ ರಸ್ತೆ ನಡಿಗೆ ಸ್ಕಂದಗಿರಿಯನ್ನು ನೆನಪಿಸುತ್ತಿತ್ತು. ಅಂತಹುದೇ ರಸ್ತೆ, ಗಲ್ಲಿಗಳಲ್ಲಿ ಗುಲಾಲಿ ಬಣ್ಣದ ಕೈಗವಸುಗಳನ್ನು ತೊಟ್ಟು, ಮುಖಕ್ಕೊಂದು ಮುಖವಾಡ ತೊಟ್ಟು, ಒಂದೊಂದು ಪ್ಲಾಸ್ಟಿಕ್ ಚೀಲಗಳನ್ನು ಹೊತ್ತೊಯ್ಯುತ್ತಿದ್ದ ಒಂದಿಷ್ಟು ಜನರ ಚಿತ್ರ ಕಣ್ಮುಂದೆ ಸುಳಿದು ಹೋಯ್ತು. ಒಮ್ಮೆ 'ಸ್ವಚ್ಛ ಸ್ಕಂದಗಿರಿ’ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ, ಬೆಟ್ಟದ ದಾರಿಯುದ್ದಕ್ಕೂ ಬಾಟಲು, ಪ್ಲಾಸ್ಟಿಕ್ ಇತ್ಯಾದಿ ಕಸವನ್ನು ಕಂಡಾಗ ಅದೇನೋ ಹಿಂಸೆಯಾಗುತ್ತಿತ್ತು. ಆ ರೀತಿ ಗಲೀಜು ಮಾಡಿ ಹೋದವರ ಬಗ್ಗೆ ಯಾರೆಂಬ ಅರಿವಿಲ್ಲದಿದ್ದರೂ ಮನದಲ್ಲೇ ತಿರಸ್ಕಾರ ಮೂಡುತ್ತಿತ್ತು. ಮಧ್ಯದಲ್ಲಿ ಬೀಸುತ್ತಿದ್ದ ತಣ್ಣನೆಯ ಗಾಳಿ ಈ ಎಲ್ಲಾ ಯೋಚನೆಗಳನ್ನು ಬದಿಗೆ ಸರಿಸಿ 'ಇಲ್ಲದಿರುವುದ ಮರೆತು, ಇರುವುದನನುಭವಿಸು' ಎಂದು ಸಾರಿ ಹೇಳುತ್ತಿತ್ತು. ಇವೆಲ್ಲದರ ಜೊತೆಗೇ ದಣಿದ ದೇಹಕ್ಕಿಷ್ಟು ವಿಶ್ರಾಂತಿಯನ್ನೂ, ಉಂಟಾದ ದಾಹಕ್ಕೆ ಗುಟುಕು ನೀರನ್ನೂ, ಅವರಿವರು ಹೊತ್ತು ತಂದಿದ್ದ ತಿಂಡಿ ತಿನಿಸುಗಳನ್ನೂ ಹೊಂದುತ್ತಾ ಹೆಜ್ಜೆ ಹೆಜ್ಜೆಯಾಗಿ ಮೇಲೆ ಸಾಗುತ್ತಿದ್ದೆವು.

ನಾವು ಬೆಟ್ಟದ ಬುಡದಲ್ಲಿ ನಿಂತಿದ್ದಾಗ ನಮ್ಮ ಎಡ ಹಾಗೂ ಬಲಕ್ಕೊಂದೊಂದು ಬೆಟ್ಟಗಳು ಕಾಣುತ್ತಿದ್ದವು. ನಾವು ಸಾಗತೊಡಗಿದ ದಾರಿ ಒಂದು ತರಹ ಹೆಣ್ಣುಮಕ್ಕಳು ತೊಡುವ ಹೇರ್ ಪಿನ್ನಿನಂತಹ ದಾರಿ. ಒಮ್ಮೆ ಎಡಕ್ಕೆ ಪೂರ್ತಿ ಸಾಗಿದ ಬಳಿಕ ಬಹುತೇಕ ಅಷ್ಟೇ ಭಾಗ ಬಲಕ್ಕೆ ವಾಪಸ್ಸು ಬರುವುದಿತ್ತು. ಒಂದೊಮ್ಮೆ ನಾವು ಹತ್ತುತ್ತಿರುವುದು ಯಾವ ಬೆಟ್ಟ ಎಂದು ನಮಗೇ ಗೊಂದಲವಾಗಿದ್ದೂ ಉಂಟು. ಇಂತಹ ಗೊಂದಲದ ಒಂದು ಪರಿಣಾಮವೇ ನಮಗೆ ನಾಲ್ಕು ಗುಟುಕು ಕಬ್ಬಿನಹಾಲು ಕುಡಿಸಿತು. ಅದೇನಾಯ್ತಪ್ಪಾ ಅಂದ್ರೆ, ಒಂದಿಷ್ಟು ಸವೆದ ದಾರಿಯ ಜಾಡನ್ನೇ ಹಿಡಿದು ಸೀದಾ ಮುಂದೆ ಹೋದ ನಾವು ಒಂದು ಚೆನ್ನಾದ ಡಾಂಬರು ರಸ್ತೆಗೆ ತಲುಪಿದ್ದೆವು. ಬಲಕ್ಕೆ ಸಾಗಿದರೆ ನಂದಿ ಬೆಟ್ಟ, ಎಡಕ್ಕೆ ಬ್ರಹ್ಮಗಿರಿ. ಎರಡೂ ಬಿಟ್ಟು ಮಧ್ಯದಲ್ಲಿ ನಿಂತಿದ್ದ ಗಾಡಿಯ ಬಳಿ ಹೋಗಿ ಕಬ್ಬಿನಹಾಲು ಕೊಂಡು ಕುಡಿದಾದ ಮೇಲೆ ಮತ್ತೆ ಈ ಹಿಂದೆ ಬಂದವರಿಗೆ ಕರೆ ಮಾಡಿ ನಾವು ದಾರಿ ತಪ್ಪಿದ್ದ ವಿಷಯ ತಿಳಿಸಿದೆವು. ಅತ್ತ ಕಡೆಯಿಂದ ಬಂದ ಮಾಹಿತಿಯ ಪ್ರಕಾರ ಆ ತಂಡವೂ ದಾರಿ ತಪ್ಪಿ ಇದೇ ಜಾಗಕ್ಕೆ ಬಂದಿದ್ದರಂತೆ. ಆದರಾಗ ಕಬ್ಬಿನಹಾಲಿನ ಗಾಡಿ ಇತ್ತೋ, ಇರಲಿಲ್ವೋ ಗೊತ್ತಿಲ್ಲ. ಬೇಕಾಗಿದ್ದಿದ್ದು ದಾರಿ ಆಲ್ವಾ, ಬಂದ ದಾರಿಯಲ್ಲೇ ಸ್ವಲ್ಪ ಹಿಂದೆ ಸಾಗಿ ಬಲಕ್ಕೆ ತಿರುಗಬೇಕಿತ್ತು. ಅಂತೂ ಸರಿಯಾದ ದಾರಿ ಹಿಡಿದು ಮುನ್ನಡೆದೆವು. ಕುಡಿದ ಕಬ್ಬಿನಹಾಲು ಎಲ್ಲರಿಗೂ ಒಂದಿನಿತು ಚೈತನ್ಯ ತುಂಬಿದ್ದು ದಿಟವಾದರೂ ಕಡೆಯ ಸುಮಾರು ಒಂದು ಮೈಲಿಯ ನಡಿಗೆ ಕೆಲವರಿಗೆ ಸುಸ್ತು ತಂದಿದ್ದೂ ಅಷ್ಟೇ ದಿಟ. ಹಾಗೂ ಹೀಗೂ ಕೂರುತ್ತಾ, ಏರುತ್ತಾ ಬೆಟ್ಟದ ತುದಿಗೆ ಮುಟ್ಟುವಾಗ ಗಂಟೆ ಒಂದು ದಾಟಿತ್ತು.




ಬೆಂಗಳೂರಿನಲ್ಲಿರುವುದು ಬರೀ ಎರಡೇ ಕಾಲ. ಒಂದು ಚಳಿಗಾಲ, ಮತ್ತೊಂದು ಚಳಿಗಾಲವಲ್ಲ. ಇದೇ ಕಾರಣವೋ, ಇಲ್ಲವಾದರೂ ಬೆರೆಡೆಯಲ್ಲೆಲ್ಲಾ ಮಳೆಗಾಲ ಕಳೆದು ಸುಮಾರು ನಾಲ್ಕು ತಿಂಗಳಾಗುತ್ತಾ ಬಂದಿರುವುದರಿಂದಲೂ ಎಲ್ಲೂ ಹಚ್ಚ ಹಸಿರನ್ನು ಕಾಣುವುದು ಶಕ್ಯವಿರಲಿಲ್ಲ. ಬದಲಿಗೆ ಬೆಳೆದಿದ್ದ ಹುಲ್ಲೆಲ್ಲಾ ಒಣಗಿ, ಒಂದು ಕಾಲದ ಹುಲ್ಲಿನ ರತ್ನಗಂಬಳಿ ಈಗ ಶರ ಶಯ್ಯೆಯಾಗಿತ್ತು. ಅದಿಷ್ಟೇ ಸಾಲದ್ದಕ್ಕೆ ಈ ಎಲ್ಲಾ ಬೆಟ್ಟಗಳಲ್ಲಿ ಕಲ್ಲು ಬಂಡೆಗಳೇ ಹೆಚ್ಚು. ಅವನ್ನು ಕಂಡು ಹರ್ಷಿಸುವ ಜನ ನೀವಾದರೆ ನಿಮಗಿದೊಂದು ಅದ್ಭುತ ತಾವು ಎಂದು ಕಂಡೀತು. ಇಲ್ಲಿಯ ಬಂಡೆಗಳು ನಿತ್ಯವೂ ಹೊಸ ಹೊಸ ಪಾರ್ಟ್ ಟೈಮ್, ಫುಲ್ ಟೈಮ್ ಪ್ರೇಮಿಗಳ ಹೆಸರಿನ ಹಚ್ಚೆ ಹಾಕಿಸಿಕೊಳ್ಳುತ್ತವೆ. ಆದರೆ ಹಚ್ಚೆ ಮಾತ್ರ ಪರ್ಮನೆಂಟ್ ಅಲ್ಲ. ಕಾಲ ಸವೆದಂತೆ ಅದೂ ಸವೆದು ಹೋಗುವುದುಂಟು. ಇನ್ನು ಹಚ್ಚೆ ಬರೆದವರಿಗೇನಾದರೂ ತಾನು ಯಾರ್ಯಾರ ಬೆನ್ನ ಮೇಲೆ ಬರೆದಿರುವೆನೆಂಬ ನೆನಪಿರುತ್ತದೋ ! ಮುಂದೊಮ್ಮೆ ತನ್ನ ಹೊಸ ಪ್ರಿಯತಮೆಯ ಜೊತೆ ಹೋದಾಗ ಹಿಂದಿನ ಕೆತ್ತನೆಯಲ್ಲಿರುವ ತನ್ನ ಹೆಸರನ್ನು ಕಂಡೊಡನೊಮ್ಮೆ ಬೆವರೊರೆಸಿಕೊಂಡು ನಾನವನಲ್ಲ ಅಂದಾನು; ಇಲ್ಲವೇ ಇಬ್ಬರೂ ತಾವು ಹಿಂದೊಮ್ಮೆ ಬಂದಾಗಿನ ನೆನಪನ್ನು ಮೆಲುಕು ಹಾಕಿಯಾರು. ಇಂತಿಪ್ಪ ಭೂತ ಬಂಡೆಗಳ ನಡುವೊಂದು ಮರದ ನೆರಳಲ್ಲಿ ಕುಳಿತು, ಹೊತ್ತು ತಂದಿದ್ದ ಪೊಟ್ಟಣಗಳನ್ನು ಬಿಚ್ಚಿ ಚಿತ್ರಾನ್ನ, ವಡೆಗಳನ್ನು ಮೆದ್ದು ಸ್ವಲ್ಪ ಹೊತ್ತು ಹರಟುತ್ತಾ ಕಾಲ ಕಳೆದೆವು.




ಇನ್ನೂ ಇಲ್ಲೇ ಕುಳಿತೆವಾದರೆ ರಾತ್ರಿಯೊಳಗೆ ವಾಪಸ್ಸು ಮನೆ ಸೇರುವುದು ಕಷ್ಟವಾದೀತೆಂದು ತೋರಿ ಎಲ್ಲರೂ ಮರಳಲಣಿಯಾದೆವು. ನೆನಪಿನ ಬುತ್ತಿಗೆ ಒಂದಿಷ್ಟು ಗ್ರೂಪ್ ಫೋಟೋಗಳನ್ನು ಪಾರ್ಸೆಲ್ ಕಟ್ಟಲಾಯ್ತು. ಬೆಳಿಗ್ಗೆ ಬಂದ ದಾರಿಯನ್ನೇ ಮತ್ತೆ ತುಳಿಯುತ್ತಾ ಹೆಜ್ಜೆ ಹಾಕಿದೆವು. ಬೆಟ್ಟ ಇಳಿಯುವುದು ಹತ್ತುವುದಕ್ಕಿಂತ ಸಲೀಸು. ಹತ್ತುವಾಗ ಉಸಿರಾಡಲು ಇರುವ ಮೂಗೊಂದು ಸಾಲದೇ, ಮಾತನಾಡಲಿಕ್ಕಾಗಿ ಇರುವ ಬಾಯನ್ನೂ ಅದಕ್ಕೇ ಬಳಸುತ್ತಿದ್ದವರು ಈಗ ಒಂದಿಷ್ಟು ಮಾತಾಡುತ್ತಿದ್ದರು. ಇನ್ನೊಂದು ಬಾಯಿ ಇದ್ದುದೇ ಆದರೆ ಇನ್ನೂ ಒಂದಿಷ್ಟು ಮಾತು ಹೆಚ್ಚಿಗೆ ಆಡಬಹುದಿತ್ತೆನೋ. ಮೂಗಿಗೆ ಒಂದೇ ಹೊಳ್ಳೆ ಇದ್ದರೂ ಸಾಕಿತ್ತೇನೋ. ಇನ್ನೂ ಏನೇನೋ ಯೋಚನೆಗಳು. ಎಷ್ಟೆಂದರೂ ಇರುವುದೆಲ್ಲವ ಬಿಟ್ಟು ಇಲ್ಲದಿದುರೆಡೆ ಸೆಳೆವುದೇ, ಸುಳಿವುದೇ  ಆಲ್ವಾ ಜೀವನ. ಜೀವನದಲ್ಲಿ ಅನುಭವಿಸುತ್ತಿರುವುದನ್ನು ಬಿಟ್ಟು ಹೊರಗಿನ ಯೋಚನೆಗಳೇ ಅಲ್ವಾ ಕನಸುಗಳು. ಕೆಲವು ಹಗಲು ಮತ್ತೊಂದಿಷ್ಟು ರಾತ್ರಿ ಕನಸುಗಳು. ಈ ಕನಸುಗಳಿಲ್ಲದ ಜೀವನ ಹೇಗಿರುತ್ತಿತ್ತು ? ಯೋಚಿಸ ಹೊರಟರೆ ಅದು ಮತ್ತೊಂದು ಕನಸಾದೀತು, ಯಾಕಂದ್ರೆ ನಿಜ ಜೀವನದಲ್ಲಿ ಎಲ್ಲರಿಗೂ ಒಂದಲ್ಲ ಒಂದು ಕನಸುಗಳಿವೆ. ಇಲ್ಲವೇ ಕನಸುಗಳು ಬೀಳುತ್ತವೆ. ಇಲ್ಲ ಅನ್ನುವವರಿಗೆ ಅವುಗಳ ನೆನಪಿರಲಿಕ್ಕಿಲ್ಲ ಅಷ್ಟೇ. ಇಷ್ಟೆಲ್ಲಾ ಯೋಚಿಸುತ್ತಾ ನಡೆಯುವುದರಲ್ಲಿ ನಾವು ಬಹುತೇಕ ಬೆಟ್ಟದ ಬುಡಕ್ಕೆ ಮರಳಿದ್ದೆವು. ಸಮೀಪದಲ್ಲೇ ಇದ್ದ ಹೋಟೆಲೊಂದರಲ್ಲಿ ಚಹಾ ಕುಡಿದಾದ ಮೇಲೆ, ಸಂಘಟಕರು ಎಲ್ಲರಿಂದಲೂ ಇಂದಿನ ಪ್ರವಾಸಾನುಭವದ ಕಿರು ಮರು ಮಾಹಿತಿ ಪಡೆದರು. ಅವರು ನಾಲ್ಕು ಮಾತಾಡಲು ಬಾಯಿ ತೆರೆಯುವ ಮೊದಲೇ ಮಜೆಸ್ಟಿಕ್ ಕಡೆಗೆ ಸಾಗುವ ಬಸ್ಸು ಬಂದಿದ್ದರಿಂದ ಎಲ್ಲರೂ ಲಗುಬಗೆಯಿಂದ ಬಸ್ಸು ಹತ್ತಿದೆವು.

ಸಂಘಟಕರ ಮಾತಿನ್ನೂ ಮುಗಿದಿರಲಿಲ್ಲವಷ್ಟೇ. ಅವರೂ ಎರಡೆರಡು ಔಪಚಾರಿಕ ಮಾತುಗಳನ್ನಾಡಿಯಾದ ಮೇಲೆ ದಿನದ ಖರ್ಚು ವೆಚ್ಚದ ಲೆಕ್ಕ ತಾಳೆ ಹಾಕಿ ಹೇಳಿದರು. ಒಬ್ಬೊಬ್ಬರ ತಲೆಯ ಮೇಲೂ ೨೩೮ ರುಪಾಯಿ, ಮೇಲೊಂದಿಷ್ಟು ಪೈಸೆಗಳ ಖರ್ಚು ಬಿದ್ದಿತ್ತು. ೧೨ ರುಪಾಯಿ ಬಿ.ಟಿ.ಸಿ ಯ ನಿಧಿಗೂ ಸೇರಿಸಿ ತಲಾ ೨೫೦ ರುಪಾಯಿ ಸಂಗ್ರಹ ಮಾಡಿದರು. ಬಸ್ಸಿನಲ್ಲಿ ಕುಳಿತಷ್ಟೂ ಹೊತ್ತು ಹಿಂದಿದ್ದ ಇಬ್ಬರ, ಮುಂದಿದ್ದ ಮೂರ್ವರ, ಮತ್ತೊಂದು ದಿಕ್ಕಿಗಿದ್ದ ನಾಲ್ಕೆಂಟು ಜನಗಳ ಮಾತಿಗೆ ಕಿವಿಯಾಗಿದ್ದೆ. ಪ್ರತಿಯೊಬ್ಬರ ಮಾತಿನಲ್ಲೂ ವ್ಯಕ್ತವಾಗುತ್ತಿದ್ದ ವಿಷಯಗಳು ಬೇರೆ ಬೇರೆ. ನೀರವತೆಯಲ್ಲಿ ಮನಸ ನೆಟ್ಟು ಸಂತಸ ಪಡುವವರು ನೀವಾಗಿದ್ದರೆ ಎಲ್ಲಾ ನಿಮಗೆ ಕಿರಿ ಕಿರಿ ಅನ್ನಿಸೀತು. ಆದರೆ ಮನೆಗೆ ಮರಳುವ ದಾರಿಯಲ್ಲಿ ದಿನವನ್ನು ನೆನೆದಾಗ ಒಬ್ಬೊಬ್ಬರ ಒಂದೊಂದು ಮಾತೂ ಕಲರವದಂತೆ ಕಲಕುತ್ತಿತ್ತು. ಇಷ್ಟರಲ್ಲೇ ದಿನದ ಚಾರಣಕ್ಕೆ ಅಧಿಕೃತ ತೆರೆ ಬಿದ್ದಿತ್ತಾದರೂ ಗಳಿಸಿದ ಗೆಳೆತನಕ್ಕಲ್ಲ. ಮುಂದೊಮ್ಮೆ ಯಾವುದೋ ಒಂದು ಚಾರಣದ ಸಂದರ್ಭದಲ್ಲಿ ಮತ್ತೆ ಭೇಟಿಯಾದೇವು ಎಂಬೊಂದು ಆಶಾವಾದದ ತಿಳಿ ಬೆಳಕು ಬೇಕೆನ್ನದೆಯೂ ಮಿನುಗುತ್ತಿತ್ತು.



~~~~~~~~~~ ~~~~~~~~~~ ~~~~~~~~~~ ಮುಗಿಯಿತು~~~~~~~~~~ ~~~~~~~~~~ ~~~~~~~~~~

Thursday 8 January 2015

ಯಾವುದು ಸರಿ ? ಯಾವುದು ತಪ್ಪು ?

     'ಸ್ವಚ್ಛ ಭಾರತ್, ಶ್ರೇಷ್ಠ ಭಾರತ್' ಅನ್ನೋ ಬರಹ ಹೊತ್ತ ಸಣ್ಣ ಹಲಗೆಯೊಂದನ್ನು ಕೊರಳಿಗೆ ನೇತು ಹಾಕಿಕೊಂಡು, ಒಂದು ಕೈಯಲ್ಲಿ ಮೂರ್ನಾಲ್ಕು ಖಾಲಿ ಗೋಣಿಚೀಲಗಳನ್ನೂ, ಮತ್ತೊಂದು ಕೈಯಲ್ಲಿ ಸಣ್ಣದೊಂದು ಕಡ್ಡಿ ಪೊರಕೆ ಹಾಗೂ ಸ್ವಲ್ಪ ಉದ್ದವಾದ ದೊಣ್ಣೆಯೊಂದನ್ನು ಹೊತ್ತು ಬೆಟ್ಟದ ತಪ್ಪಲೊಂದಕ್ಕೆ ಹೋಗಿದ್ದೆ. ಅವರಿವರು ಎಸೆದಿದ್ದ ಕಸವನ್ನೆಲ್ಲಾ ಎತ್ತಿ, ಆ ತಪ್ಪಲನ್ನು ಸ್ವಚ್ಛಗೊಳಿಸಿ; ಆ ಕಸದಿಂದ ರಸವನ್ನೋ, ರಸಗೊಬ್ಬರವನ್ನೋ ತಯಾರಿಸುವ ಹೆಬ್ಬಯಕೆ. ಅದು ಸಾಧ್ಯವಾಗದಿದ್ದಲ್ಲಿ ಆ ಒಂದು ತಪ್ಪಲಿನ 'Before' ಮತ್ತು 'After' ಫೋಟೋ ತೆಗೆದು ನಮ್ಮ ಪ್ರಧಾನಿಯವರಿಗೆ ಕಳಿಸಿದೆನಾದರೆ ಅವರ ಕನಸನ್ನು ಸಾಕಾರಗೊಳಿಸುತ್ತಿರುವೆನೆಂಬ ಕಾರಣಕ್ಕೆ ನನಗೊಂದಿಷ್ಟು ಪಾರಿತೋಷಕಗಳು ಸಿಕ್ಕಾವು, ಅವೇ ಫೋಟೋಗಳನ್ನು Facebookನಲ್ಲಿ ಹಾಕಿದೆನಾದರೆ ನೂರಾರು ಲೈಕುಗಳೂ  ಬಂದಾವು, ನಾನೂ ಈ ಒಂದು ಪ್ರಪಂಚದಲ್ಲಿ ಸಣ್ಣಗೆ ಪ್ರಸಿದ್ಧನಾದೇನು ಎಂಬೊಂದು ಆಸೆ. ಭೂಮಿಯ ಮೇಲೆ ಹುಟ್ಟಿದುದಕ್ಕೆ ಗುರುತಾಗಿ ಒಂದು ಹೆಸರನ್ನಾದರೂ ಬಿಟ್ಟು ಹೋಗಬೇಡವೇ, ಸತ್ತ ಮೇಲೆ ನಾಲ್ಕು ಕಡೆ ಸಿಮೆಂಟಿನದ್ದೋ, ಕಬ್ಬಿಣದ್ದೋ ವಿಗ್ರಹಗಳನ್ನು ನೆಟ್ಟು; ಜೀವಂತ ಮನುಷ್ಯರು ತಲೆ ಮೇಲೆ ಸೂರಿಲ್ಲದೆ ರಸ್ತೆ ಬದಿಯಲ್ಲಿ ಮಳೆ ಬಿಸಿಲುಗಳ ಸಹಿಸಲಾಗದೇ ನರಳುತ್ತಾ ಬಿದ್ದಿರುವಾಗ, ಸ್ಮಾರಕ ಎಂಬ ಹೆಸರಿನ ಗುಡಿಸಲೊಳಗೆ ನಗುತ್ತಾ ನಿಲ್ಲಬೇಡವೇ. ನಾಲ್ಕು ಮಾರ್ಗಗಳಿಗೆ ನನ್ನ ಹೆಸರನ್ನಿಟ್ಟು, ಮೂರು ಸರ್ಕಲ್ಲುಗಳಲ್ಲಿ ಮೂರ್ತಿಗಳನ್ನು ನೆಟ್ಟು, ಅದರ ಮೇಲೆ ಕಾಕಪಿಷ್ಟದ ಅಭ್ಯಂಜನವಾಗಬೇಡವೇ. ಕಾಕಪಿಶ್ಟದ ನೆನಪು ಬಂದೊಡನೆ ಒಮ್ಮೆ ತಲೆ ಮುಟ್ಟಿ ನೋಡಿಕೊಂಡೆ. ಏನೂ ಇರಲಿಲ್ಲ. ಮೇಲೆ ಹತ್ತುವಷ್ಟರಲ್ಲಾದ ಸುಸ್ತಿಗೆ ಕಲ್ಲಿನ ಮಂಟಪದಲ್ಲಿ ತಣ್ಣನೆಯ ಗೋಡೆಯನ್ನು ಒರಗಿ ಕೂತವನಿಗೆ ಒಳ್ಳೆ ನಿದ್ರೆ ಬಂದು ಕನಸು ಕಟ್ಟಿತ್ತು. ಬ್ಯಾಗಿನಲ್ಲಿದ್ದ ನೀರಿನ ಬಾಟಲಿಯಿಂದ ಮುಖಕ್ಕಿಷ್ಟು ನೀರು ಸಿಂಪಡಿಸಿಕೊಂಡು ನನ್ನಷ್ಟೂ ಪರಿಕರಗಳೊಂದಿಗೆ ಹೊರಬಿದ್ದೆ.

     ಸ್ವಲ್ಪವೇ ದೂರದಲ್ಲಿ ಐದು ಜನರ ಗುಂಪೊಂದು ಹರಟುತ್ತಾ ಕುಳಿತಿತ್ತು. ಮಧ್ಯೆ ಮಧ್ಯೆ ನೆಲದಿಂದ ಮೇಲೆದ್ದು ಬರುತ್ತಿದ್ದ ಬಾಟಲಿಗಳನ್ನು ಕಂಡೆ. 'ಹಾಳು ಕುಡುಕರು' ಎಂದು ಮನದಲ್ಲೇ ಬೈದುಕೊಂಡು ಮತ್ತೊಂದು ದಿಕ್ಕಿನೆಡೆ ಹೋದೆ. ಚೀಲ ಪೊರಕೆಗಳನ್ನೆಲ್ಲಾ ಕೆಳಗಿಟ್ಟು, ಗಲೀಜಾಗಿದ್ದ ಒಂದು ದಿಕ್ಕಿನ ಫೊಟೊ ತೆಗೆಯಲೆಂದು ಕ್ಯಾಮೆರಾ ಕೈಗೆ ಎತ್ತಿಕೊಳ್ಳುವ ವೇಳೆಗೆ ಅದೆಲ್ಲಿದ್ದನೋ ಭೂಪ, ಅರಣ್ಯ ರಕ್ಷಕನೊಬ್ಬ ಕೈಯಲ್ಲಿ ದೊಣ್ಣೆ ಹಿಡಿದು ಏನನ್ನೋ ಕೂಗುತ್ತಾ ಬಂದ. ನನಗದು ಸ್ಪಷ್ಟವಾಗಿ ಕೇಳಿಸಲಿಲ್ಲ. ಮತ್ತೊಮ್ಮೆ ನಾನು ಕ್ಯಾಮೆರಾದ ಕಣ್ಣಲ್ಲಿ ಕಣ್ಣಿಡುವಷ್ಟರಲ್ಲಿ ಆತ ಎದುರಿಗೇ ನಿಂತಿದ್ದ. ಕ್ಯಾಮೆರಾದಲ್ಲಿ ಕಸದ ಬದಲು ದುರುಗುಟ್ಟುವ ಅವನ ಕೆಂಪು ಕಣ್ಣುಗಳು ಕಾಣುತ್ತಿದ್ದವು.

     "ಸ್ವಲ್ಪ ಸೈಡಿಗೆ ಬನ್ನಿ ಸಾರ್, ಫೋಟೋ ತಗೋತಿದೀನಿ" ಎಂದ ನನ್ನ ಮಾತು ಮುಗಿಯುವಷ್ಟರಲ್ಲಿ ಆತ ನಾನು ಯಾವೆಲ್ಲಾ ಸಾಮಾನುಗಳನ್ನು ಹೊತ್ತು ಬಂದಿದ್ದೇನೆಂದು ನೋಡಿಯಾಗಿತ್ತು.
     "ಎಲ್ಲಿಂದ ಬಂದಿದೀರಾ, ಇವೆಲ್ಲಾ ಏನು ?" ಗತ್ತಿನಿಂದಲೇ ಕೇಳಿದ.
     "ಬೆಟ್ಟ ಕ್ಲೀನ್ ಮಾಡಕ್ಕೆ ಬಂದಿದೀನಿ ಸಾರ್. ಇಲ್ಲಿ ಬಿದ್ದಿರೋ ಪ್ಲಾಸ್ಟಿಕ್, ರಬ್ಬರ್, ಪೇಪರ್, ಗ್ಲಾಸಿನ ತ್ಯಾಜ್ಯಗಳನ್ನೆಲ್ಲಾ ಒಟ್ಟುಮಾಡಿ ರಿಸೈಕಲ್ ಪ್ಲಾಂಟ್ ಗೆ ಕಳಿಸ್ತೀನಿ ಸಾರ್. ಕಸದಿಂದ ರಸ, ಜೊತೆಗೇ ಸ್ವಚ್ಛ ಭಾರತ್ ಶ್ರೇಷ್ಠ ಭಾರತ್" ಕೊರಳಲ್ಲಿದ್ದ ಹಲಗೆ ತೋರಿಸುತ್ತಾ ಹೇಳಿದೆ.
     "ಬಿ.ಜೆ.ಪಿಯವ್ನೇನೋ ನೀನು ?" ಮತ್ತದೇ ಗತ್ತು.
     "ನಾನು ಯಾವ ಪಕ್ಷದಲ್ಲೂ ಇಲ್ಲ ಸಾರ್, ಒಳ್ಳೇ ವಿಷಯಗಳನ್ನು ಅನುಸರಿಸೋಕೆ ಯಾವ ಪಕ್ಷ ಆದ್ರೆ ಏನು ಸಾರ್. ಅಷ್ಟಕ್ಕೂ ಮೋದಿ ಹೇಳ್ತಿರೋದ್ನ ಎಪ್ಪತ್ತು ವರ್ಷ ಹಿಂದೆ ಗಾಂಧೀಜಿ ಹೇಳಿಲ್ವಾ, ಅವ್ರು ಕಾಂಗ್ರೆಸ್ಸು" ಎಂದೆ.
     "ಹಾಗಿದ್ರೆ ನೀನು ಕಾಂಗ್ರೆಸ್ ಪಕ್ಷದೋನಾ ?" ಮತ್ತದೇ ಪ್ರಶ್ನೆ.
     "ಇಲ್ಲ ಸಾರ್, ನಾನು ಯಾವ ಪಕ್ಷದಲ್ಲೂ ಇಲ್ಲ. ನಾನು ಬಂದಿರೋದು ಈ ಬೆಟ್ಟ ಕ್ಲೀನ್ ಮಾಡಣ ಅಂತ ಅಷ್ಟೇ" ಎನ್ನುತ್ತಾ ಪಕ್ಕದಲ್ಲಿಟ್ಟಿದ್ದ ಪೊರಕೆ ಕೈಗೆತ್ತಿಕೊಂಡು ಮುಂದೆ ಹೊರಟೆ.
     "ಏಯ್, ನಾನು ಮಾತಾಡ್ತಾನೇ ಇದೀನಿ. ಅದ್ಯೆತ್ತಾ ಹೊರ್ಟಿ? ಬಾರೋ ಇಲ್ಲಿ" ಧ್ವನಿ ಜೋರಾಗಿತ್ತು.
     "ಏನ್ ಸಾರ್. ಕೈಯಲ್ಲಿ ಪೊರಕೆ ನೋಡಿ ಆಮ್ ಆದ್ಮಿ ಪಾರ್ಟಿ ಅನ್ಕೊಂಡ್ರಾ, ಈಗ ಬಿ.ಜೆ.ಪಿಯವ್ರು ಕೂಡಾ ಕೈಯಲ್ಲಿ ಪೊರಕೆ ಹಿಡ್ಕೊಂಡು ಕ್ಯಾಮೆರಾಗೆ ಪೋಸು ಕೊಡ್ತಾರೆ." ತಾಳ್ಮೆಗೆಟ್ಟು ನುಡಿದೆ.
     "ಅದಕ್ಕಲ್ಲಯ್ಯಾ, ಅದೇನೋ ರಸದಿಂದ ಕಸ ಅಂತಿದ್ಯಲ್ಲಾ, ಫಾರೆಸ್ಟ್ ಡಿಪಾರ್ಟ್ಮೆಂಟಿಂದ ಪರ್ಮಿಶನ್ ತಗೊಂಡಿದೀಯಾ ?" ಆತ ಕೇಳಿದ.
     ನನ್ನ ಧ್ಯೇಯವನ್ನು ಆತ ತಿರುಗು ಮುರುಗಾಗಿ ಹೇಳಿದ್ದು ಅರಿವಿಗೆ ಬಂದರೂ ಕೊನೆಯ ಮಾತು ನನ್ನ ನಾಲಿಗೆಯನ್ನು ಕಟ್ಟಿ ಹಾಕಿತು. ನನಗೇ ಕೇಳಿಸದಷ್ಟು ಸಣ್ಣ ದನಿಯಲ್ಲಿ "ಇಲ್ಲ ಸಾರ್" ಎಂದೆ.
     "ನೋಡಪ್ಪಾ, ಪರ್ಮಿಶನ್ ಇಲ್ದೆ ಇಲ್ಲಿ ನೀನು ಸ್ವರ್ಗದಿಂದ ಪಾರಿಜಾತದ ಗಿಡ ತಂದು ನೆಡ್ತೀನಂದರೂ ಬಿಡಕಾಗಲ್ಲ. ಸೋ ಏನೇನು ತಗೊಂಡು ಬಂದಿದೀಯೋ ಎಲ್ಲಾ ಹೊತ್ಕೊಂಡು ವಾಪಸ್ ಹೋಗಿಬಿಡು." ಆತ ನಯವಾಗಿಯೇ ಹೇಳಿದ್ದ. ಆದರೂ ದೂರದಲ್ಲಿ ಕುಡಿಯುತ್ತಾ ಕೂತಿದ್ದವರ ಗುಂಪು ನೋಡಿದಾಗ ನನ್ನ ಅಹಂಕಾರಕ್ಕೆ ಪೆಟ್ಟು ಬಿದ್ದಿತ್ತು.
     "ಕುಡಿದು ಇಲ್ಲಿಯ ಪರಿಸರಾನ ಹಾಳು ಮಾಡೊಕ್ಕೆ ನೀವು ಪರ್ಮಿಶನ್ ಕೇಳಲ್ಲ. ಅದನ್ನ ಕ್ಲೀನ್ ಮಾಡ್ತೀನಂದ್ರೆ ಅಡ್ಡ ಮಾತಾಡ್ತೀರಲ್ಲಾ, ಇದು ಯಾವ ಸೀಮೆ ನ್ಯಾಯ ಸಾರ್?" ನನ್ನ ಧ್ವನಿ ನನಗೇ ತಿಳಿಯದಂತೆ ಜೋರಾಗಿತ್ತು. ನಾನು ಯಾರ ಕುರಿತು ಮಾತಾಡಿದ್ದೆಂಬುದು ಅವನಿಗೆ ಅರಿವಾಗಿತ್ತು.
     "ನೋಡಪ್ಪಾ, ಕುಡಿಯೊರೇನಿದ್ರೂ ತಮ್ಮಲ್ಲಿರೋದನ್ನ ಇಲ್ಲಿ ಬಿಟ್ಟು ಹೋಗ್ತಾರೆ. ನಿನ್ ಥರ ಇಲ್ಲಿಂದ ಬಾಚ್ಕೊಂಡು ಹೋಗಲ್ಲ." ಎನ್ನುತ್ತಾ ಆತ ಗುಟ್ಕಾ ತಿಂದು ಕೆಂಪಗಾಗಿದ್ದ ತನ್ನ ಹಲ್ಲುಗಳನ್ನು ತೋರುತ್ತಾ ನಗೆಯಾಡಿದ್ದ.
     "ಆದ್ರೆ ಬಾಚ್ಕೊಂಡು ಹೋಗೋದು ಕಸಾನ ತಾನೇ, ಅದರಿಂದ ಇಲ್ಲಿಯದೇ ವಾತಾವರಣ ಚೆನ್ನಾಗಿರೋದು. ಅದು ಬಿಟ್ಟು ನಾನೇನು ಇಲ್ಲಿಂದ ನಿಧಿ ಕೊಳ್ಳೆ ಹೊಡ್ಕೊಂಡೇನು ಹೋಗಲ್ಲ ಸಾರ್." ನನ್ನ ಅಸಮಾಧಾನವನ್ನು ವ್ಯಕ್ತಪಡಿಸಿದ್ದೆ.
     "ಹಾಗೆ ಯಾರದ್ರೂ ಹೋದ್ರೂನು ನಂಗೆ ಗೊತ್ತಾಗೊಲ್ಲಪ್ಪ, ನಾನೇನು ನಿನ್ನ ಬೆನ್ನ ಹಿಂದೇನೆ ಕಾವಲು ಕಾಯೋಕ್ಕಾಗುತ್ತಾ" ಏರದ ದನಿಯಲ್ಲೇ ಮಾತು ಬಂದಿತ್ತು.
     "ಬೇರೆಯವರ ಬಗ್ಗೆ ನಂಗೆ ಗೊತ್ತಿಲ್ಲ ಸಾರ್, ನಾನೇನು ಹಾಗೆ ಮಾಡೋಲ್ಲ. ನನ್ನ ನಂಬಿ ಸಾರ್" ನಾನೂ ನನ್ನ ಧ್ವನಿ ತಗ್ಗಿಸಿದ್ದೆ.
       "ನೋಡಪ್ಪಾ, ನನಗೆ ಬೇರೆ ಜನ ಹೇಗೋ ನೀನೂ ಹಾಗೇ. ಎಲ್ಲರೂ ನನಗೆ ಹೊಸಬರೇ. ಒಬ್ಬನಲ್ಲಿ ನಂಬಿಕೆ, ಮತ್ತೊಬ್ಬನಲ್ಲಿ ಅಪನಂಬಿಕೆ ನನ್ನಿಂದಾಗದ ಮಾತು. ಹಾಗಂತ ಎಲ್ರನ್ನ ನಂಬಿ ನನ್ನ ತಲೇನ ಪಣಕ್ಕಿಡೋದು ಸಹಾ ಸಾಧ್ಯ ಇಲ್ಲ. ನೀನು ಪರ್ಮಿಶನ್ ತಗೊಂಡು ಬಂದ್ರೆ ನಿಂಗೂ ಕ್ಷೇಮ, ನಂಗೂ ಕ್ಷೇಮ." ಕಡ್ಡಿ ಮುರಿದಂತೆ ಆತ ಸ್ಪಷ್ಟವಾಗಿ ಹೇಳಿದ್ದರೂ ನನ್ನ ಅಹಂಕಾರದ ಬುದ್ಧಿಗೆ ತಿಳಿಯಲಿಲ್ಲ. ಹಾಗಂತ ಅವನನ್ನು ಧಿಕ್ಕರಿಸಿ ಮುನ್ನುಗ್ಗುವ ಧೈರ್ಯವೂ ಬರಲಿಲ್ಲ. ಸುಮ್ಮನೆ ತಲೆ ಮೇಲೆ ಕೈ ಹೊತ್ತು ಕುಳಿತೆ. ಆತ ಆ ಕುಡುಕರಲ್ಲೊಬ್ಬನ ಬಳಿ ಹೋಗಿ ನಗು ನಗುತ್ತಾ ಮಾತಾಡುತ್ತಿದ್ದ. 'ಇವನೂ ಕುಡುಕ, ಅವರೂ ಕುಡುಕರು. ಅವರವರಿಗೆ ಜೋಡಿ ಸರಿ ಇದೆ. ಮೂರ್ಖರ ನಾಡಲ್ಲಿ ಬುದ್ಧಿವಂತನೇ ಮೂರ್ಖ.' ಎಂದು ಮನಸ್ಸಲ್ಲೇ ಬುಸುಗುಡುತ್ತಾ, ಚೀಲ ಪೋರಕೆಗಳೆಲ್ಲವನ್ನೂ ಅಲ್ಲೇ ಬಿಟ್ಟು ಕುಡುಕರ ಗುಂಪಿನತ್ತ ನಡೆದೆ. ಅವರು ಮಾಡಿರಬಹುದಾದ ಅಧ್ವಾನವನ್ನು ಹೇಗಾದರೂ ಸರಿ ಆ ಅರಣ್ಯ ರಕ್ಷಕನಿಗೆ, ಅವನ ಅಧಿಕಾರಿಗೆ ಮನದಟ್ಟು ಮಾಡಿಸುವ ಹಠ ನನ್ನಲ್ಲಿ ಮೂಡಿತ್ತು.

     ರಾತ್ರಿಯಿಂದ ಕುಡಿದು ಬಿದ್ದವರ ದಾಹ ತೀರಿತ್ತೇನೋ. ಅವರು ಹೊರಡಲನುವಾಗಿದ್ದರು. ಅವರಲ್ಲೊಬ್ಬ ನನ್ನ ಬಳಿ ಬಂದು "ಹಾಯ್" ಎನ್ನುತ್ತಾ ಕೈ ಚಾಚಿದ. ಒಲ್ಲದ ಮನಸ್ಸಿನಿಂದಲೇ ಕೈ ಮುಂದೆ ಚಾಚಿದೆ.
     "ಕ್ಲೀನ್ ಅಪ್ ಆಕ್ಟಿವಿಟೀಸ್ ನಡೆಸ್ತಿದೀರ ?" ಅವನ ಪ್ರಶ್ನೆ ನನ್ನನ್ನೇ ಅಣಕವಾಡುವಂತಿತ್ತು. ಅಥವಾ ನಾನು ಹಾಗಂದುಕೊಂಡೆ.
     "ಇಲ್ಲ, ಟ್ರೆಕ್ಕಿಂಗ್ ಮಾಡುವ ಮನಸ್ಸಾಯ್ತು, ಹಾಗೇ ಬಂದೆ." ನಾನು ಸುಳ್ಳಾಡುತ್ತಿದ್ದೇನೆಂದು ನನ್ನ ಕೊರಳಲ್ಲಿ ನೇತಾಡುತ್ತಿದ್ದ ಫಲಕ ಸಾರಿ ಹೇಳುತ್ತಿತ್ತು. ಅದು ನೆನಪಾದಾಗ ನನಗೇ ಪಿಚ್ಚೆನಿಸಿತ್ತು.
     "ತುಂಬಾ ಒಳ್ಳೇ ಜಾಗ, ರಾತ್ರೀನೆ ಬಂದಿದ್ರೆ ಇನ್ನೂ ಚೆನ್ನಾಗಿತ್ತು." ಆತ ಮುಗುಳ್ನಗುತ್ತಾ ಹೇಳಿದ.
     'ಹಾಂ, ನೀವೇ ಕುಡಿತದ ಹುಚ್ಚಿನಲ್ಲಿ ರಾತ್ರಿಯಿಂದ ಬೆಳಿಗ್ಗೆಗೆ ಒಂದಿಷ್ಟು ಹಾಳುಗೆಡವಿದ್ದೀರಿ' ನಾನೂ ಮುಗುಳ್ನಗುತ್ತಾ, ಮನಸ್ಸಿನಲ್ಲೇ ಅವನಿಗೆ ಬೈದುಕೊಂಡೆ. ಆತ ನನಗೆ ವಿದಾಯ ಹೇಳಿ ಹೊರಡುವಷ್ಟರಲ್ಲಿ ಉಳಿದವರೂ ಅವನನ್ನು ಕೂಡಿಕೊಂಡರು. ಎಲ್ಲರೂ ಒಮ್ಮೆ ಕೈ ಎತ್ತಿ 'ಬೈ..  ಬೈ..' ಎಂದರು. ನಾನೂ ಕೈ ಎತ್ತಿದೆ. ಆತನೊಂದಿಗೆ ಕುಲುಕಿದ ಕೈಗೆ ಆಲ್ಕೋಹಾಲ್ ವಾಸನೆ ಬರುತ್ತಿತ್ತು. ಬೇಗನೇ ಕೈ ಇಳಿಸಿ ಆ ಅರಣ್ಯ ರಕ್ಷಕನತ್ತ ಧಾವಿಸಿದೆ. ಆತ ಮಿರಿಂಡಾ ಕುಡಿಯುತ್ತಾ, ಚಿಪ್ಸ್ ತಿನ್ನುತ್ತಾ ನಿಂತಿದ್ದ. ನಾನು ಓಡಿ ಹೋಗಿದ್ದೇಕೆಂದು ಅವನಿಗೆ ಅರಿವಾಗಿ ಬಿಟ್ಟಿತ್ತು. ಅವನೇ ಮಾತು ಶುರುಮಾಡಿಕೊಂಡ.
     "ನೋಡಪ್ಪಾ, ನೀನಂದುಕೊಂಡಂತೆ ಅವರಲ್ಲಿ ಎಲ್ಲರೂ ಕುಡುಕರಲ್ಲ. ಏನೇನೋ ನೆಪಗಳನ್ನೊಡ್ಡಿ ಕುಡಿಯುವ ಮೂರು ಮಂದಿ ಅವರಲ್ಲಿದ್ದರೂ, ಉಳಿದಿಬ್ಬರು ಅವನ್ನು ಮೂಸಿಯೂ ನೋಡಿದವರಲ್ಲ. ಆದರೆ ಅದು ಅವರ ಸ್ನೇಹಕ್ಕೆ ಅಡ್ಡಿ ಆಗಲಿಲ್ಲ. ಕುಡುಕರೊಂದಿಗೆ ಸೇರಿ ನಾಳೆ ನಾವೆಲ್ಲಿ ಕೆಟ್ಟು ಹೋಗುತ್ತೇವೋ ಎಂದು ಎಲ್ಲರೂ ಬೆದರುತ್ತಿದ್ದರೆ, ಇವರು ಅವರೊಂದಿಗೆ ಬರುತ್ತಾರೆ. ಮೂರು ಜನ ಅಲ್ಕೋಹಾಲ್ ಕುಡಿಬೇಕಾದ್ರೆ ಇವ್ರು ಮಿರಿಂಡಾ, ಸ್ಲೈಸ್ ಕುಡೀತಾರೆ. ಉಳಿದವರ ಮೋಜುಮಸ್ತಿ ಮುಗಿದ ಮೇಲೆ ಇವರೇ ಅಷ್ಟೂ ಜಾಗವನ್ನು ಕ್ಲೀನ್ ಮಾಡ್ತಾರೆ. ತಾವು ಮಾಡಿದ ಕಸವನ್ನ ತಾವೇ ವಿಲೇವಾರಿ ಮಾಡ್ತಾರೆ, ಎಲ್ರೂ ಅಷ್ಟಷ್ಟು ಮಾಡಿದ್ರೆ ಈ ದೇಶ ಕೆಲವೇ ಸಮಾಜ ಸುಧಾರಕರ ಸೊತ್ತಾಗೋದು ಒಂದಿಷ್ಟು ಕಡಿಮೆ ಆಗಬಹುದು. ಬದಲಿಗೆ ಈ ದೇಶ ಪ್ರತಿಯೊಬ್ಬನಿಗೂ ಸ್ವಂತದ್ದಾದೀತು." ಆತ ಮತ್ತೂ ಮಾತು ಮುಂದುವರೆಸುತ್ತಿದ್ದ. ನಾನೊಮ್ಮೆ ಪಕ್ಕಕ್ಕೆ ತಿರುಗಿ ನೋಡಿದೆ. ಅಲ್ಲಿ ಯಾವುದೇ ಬಾಟಲಿಯ ಚೂರಾಗಲೀ, ಪ್ಲಾಸ್ಟಿಕ್-ಪೇಪರ್ ನ ಚೂರುಗಳಾಗಲೀ ಕಾಣಲಿಲ್ಲ.
     "ಅವರಿಬ್ಬರು ಅಷ್ಟೆಲ್ಲಾ ಒಳ್ಳೆಯವರಿದ್ದೂ ತಮ್ಮ ಗೆಳೆಯರನ್ನು ಯಾಕೆ ಸರಿ ದಾರಿಗೆ ತರಲಿಲ್ಲ ಸಾರ್?" ನಾನು ಕೇಳಿದೆ.
     "ನೋಡಪ್ಪಾ, ಮುಂದೊಂದು ದಿನ ತಾವು ಹೋಗುತ್ತಿರುವುದು ತಪ್ಪು ಎಂದು ತಿಳಿದಾಗ ಅವರೇ ಸರಿ ದಾರಿಗೆ ಬರ್ತಾರೆ. ಅಲ್ಲಿಯವರೆಗೆ ಕಾಯಬೇಕಷ್ಟೇ. ಜಗತ್ತಿಗೇ ಬುದ್ಧಿ ಹೇಳುವಷ್ಟು ದೊಡ್ಡವನಲ್ಲ ನಾನು. ಅಥವಾ ಯಾವುದೂ ಅರಿಯದ ದಡ್ದರೂ ಅಲ್ಲ ಜಗದ ಜನ. ನಾನು ನಡೆದಿದ್ದು ಸರಿ ನೀನು ನಡೆದಿದ್ದು ತಪ್ಪು ಎನ್ನುವುದು ನಮ್ಮ ನಮ್ಮ ಮೂರ್ಖತನವಾದೀತೇ ಹೊರತು ಹೆಚ್ಚೇನಿಲ್ಲ. ಅಸಲಿಗೆ ಜೀವನದಲ್ಲಿ ಸರಿ ಮತ್ತು ತಪ್ಪು ದಾರಿಗಳೆಂಬುದೇ ಇಲ್ಲ, ಭಿನ್ನ ದಾರಿಗಳಿವೆಯಷ್ಟೇ" ಎನ್ನುತ್ತಾ ಅರಣ್ಯ ರಕ್ಷಕ ಮಾತು ಮುಗಿಸಿದ.
     'ಪರ್ಮಿಶನ್ ಇಲ್ಲದೆ ಕಸ ಹೊತ್ತೊಯ್ಯಲು ಬಿಡುವುದಿಲ್ಲ' ಎಂದಿದ್ದ ಅವನ ಮಾತು ನೆನಪಾಗಿ "ಆದರೂ ಆ ಕುಡುಕ್ ಮಕ್ಳು ಫಾರೆಸ್ಟ್ ಡಿಪಾರ್ಟ್ಮೆಂಟ್ ಪರ್ಮಿಶನ್ ಇಲ್ದೆ ಕಸ ತಗೊಂಡು ಹೋಗಿದ್ದು ತಪ್ಪು ಆಲ್ವಾ ಸಾರ್?" ಎಂದು ಕೇಳಿದೆ.
     "ಅದು ನಿಂಗೇ ಅರ್ಥ ಆಗಬೇಕಪ್ಪ, ನಾನು ಅಷ್ಟೊಂದು ಬುದ್ಧಿವಂತನಲ್ಲ" ಎಂಬ ಉತ್ತರ ಬಂತು.
     'ಪರ್ಮಿಶನ್ ಇಲ್ದೇ ಏನೂ ಹೊತ್ತೊಯ್ಬಾರ್ದು' ಎಂದು ನನ್ನಷ್ಟಕ್ಕೆ ನಾನೇ ಹೇಳಿಕೊಳ್ಳುತ್ತಾ ಕೊರಳಲ್ಲಿದ್ದ ಫಲಕವನ್ನು ಕಿತ್ತೊಗೆದೆ. ಫಲಕದ ಮೇಲಿದ್ದ ಗಾಂಧೀ ಹಾಗೂ ಮೋದಿ ನನ್ನನ್ನೇ ನೋಡಿ ನಕ್ಕಂತಾಯ್ತು. ತಿರುಗಿ ನೋಡದೆ ಬೆಟ್ಟದಿಂದ ಕೆಳಗೆ ಓಡೋಡಿ ಬಂದೆ.